ಡೈಲಿ ವಾರ್ತೆ:28 ಜುಲೈ 2023

ಬಂಟ್ವಾಳ : ಪೊಲೀಸರೊಂದಿಗೇ ಅನೈತಿಕ ಪೊಲೀಸ್ ಗಿರಿ ಮಾಡಿದ ಸಂಘ ಪರಿವಾರದ ಕಾರ್ಯಕರ್ತರು. ಪೊಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನಿಸಿದಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳಿಗೆ ನ್ಯಾಯಾಂಗ ಬಂಧನ.

ಬಂಟ್ವಾಳ : ಪೊಲೀಸರೊಂದಿಗೇ ಅನೈತಿಕ ಪೊಲೀಸ್ ಗಿರಿ ನಡೆಸಿದ ಸಂಘ ಪರಿವಾರದ ಇಬ್ಬರು ಕಾರ್ಯಕರ್ತರನ್ನು ಬಂಧಿಸಿ, ಪೊಲೀಸ್ ಕುಟುಂಬದ ಮಾನಭಂಗ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಜೈಲಿಗಟ್ಟಿದ ಘಟನೆ ಶುಕ್ರವಾರ ಬಂಟ್ವಾಳ ನಗರ ಠಾಣೆಯಲ್ಲಿ ನಡೆದಿದೆ.

ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಬಂಧಿತ ಆರೋಪಿಗಳು.

ಬಂಟ್ವಾಳ ಡಿ.ವೈ.ಎಸ್.ಪಿ. ಕಚೇರಿಯ ಪೊಲೀಸ್ ಸಿಬ್ಬಂದಿ ಕುಮಾರ್ ಎಂಬವರ ಕುಟುಂಬದ ಮೇಲೆ ಮಾನಭಂಗ ಯತ್ನ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಕುಮಾರ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.27ರಂದು ರಾತ್ರಿ ಪತ್ನಿ ಹಾಗೂ ನಾದಿನಿ ಬಿ.ಸಿ.ರೋಡಿನ ಹೊಟೇಲ್ ಒಂದರಲ್ಲಿ ಊಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಾರ್ ಒಂದರ ಮುಂಭಾಗದಲ್ಲಿ ನಿಂತುಕೊಂಡಿದ್ದ ಆರೋಪಿಗಳು ಕುಮಾರ್ ಕುಟುಂಬವನ್ನು ಹಿಂಬಾಲಿಸಿದ್ದಾರೆ ಎನ್ನಲಾಗಿದೆ.

ಕುಮಾರ್ ಪತ್ನಿ ಮತ್ತು ನಾದಿನಿಯನ್ನು ಮನೆಗೆ ತಲುಪಿಸಿ ವಾಪಸ್ ಠಾಣೆಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಆರೋಪಿಗಳು ಹುಡುಗಿಯನ್ನು ಎಲ್ಲಿ ಬಿಟ್ಟು ಬಂದೆ ?ಇಲ್ಲಿನ ವಿಚಾರ ನಿನಗೆ ಗೊತ್ತಿಲ್ಲ? ಎಂದು ಬೆದರಿಕೆ ಹಾಕಿ, ಈ ಸಂದರ್ಭ ನಾನು ಇಲ್ಲಿನ ಪೊಲೀಸ್ ಕುಮಾರ್ ಎಂದು ತಿಳಿಸಿದರೂ ಕೇಳದೆ ನೀನು ಪೊಲೀಸ್ ಅಲ್ಲ, ನೀನು ಬ್ಯಾರಿ ಎಂದು ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ಮನೆಯಿಂದ ಹೊರಗೆ ಬಂದ ಕುಮಾರ್ ಅವರ ಪತ್ನಿಯ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪಿಗಳು ಅವರ ಮಾನಭಂಗಕ್ಕೂ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.