ಡೈಲಿ ವಾರ್ತೆ: 11/ಜೂ./2024

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ಸುಣ್ಣಾರಿ ಇದರ 2024-25 ನೇ ಸಾಲಿನ ಪಿ ಸಿ ಎಂ ಸಿ ವಿಭಾಗದ ವಸತಿ ನಿಲಯ ವಿದ್ಯಾರ್ಥಿಗಳ ಪಾಲಕರ-ಶಿಕ್ಷಕರ ಸಭೆ: ಸರಕಾರಿ ಶಾಲೆಯಲ್ಲಿ ಕಲಿತು ಎಸ್ಸೆಸ್ಸೆಲ್ಸಿ ಯಲ್ಲಿ 600 ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ – ಎಂ. ಮಹೇಶ್ ಹೆಗ್ಡೆ

ಕುಂದಾಪುರ: ಕರ್ನಾಟಕ ರಾಜ್ಯದ ಸರಕಾರಿ ಶಾಲೆಯಲ್ಲಿ ಕಲಿತ ಎಸ್ಸೆಸ್ಸೆಲ್ಸಿ ಯಲ್ಲಿ 600 ಕಿಂತ ಹೆಚ್ಚು ಅಂಕ ಗಳಿಸಿದ ಪ್ರಥಮ 50 ವಿದ್ಯಾರ್ಥಿಗಳಿಗೆ ಎಂ.ಎಂ ಹೆಗ್ಡೆ ಎಜುಕೇಶನಲ್ ಚಾರಿಟೇಬಲ್  ಟ್ರಸ್ಟ್ ವತಿಯಿಂದ ಉಚಿತ ಶಿಕ್ಷಣ ನೀಡಲಾಗುವುದೆಂದು ಟ್ರಸ್ಟ್ ಅಧ್ಯಕ್ಷರಾದ  ಎಂ. ಮಹೇಶ್ ಹೆಗ್ಡೆ ಹೇಳಿದರು.


ಅವರು ಜೂ. 11 ರಂದು ಮಂಗಳವಾರ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ 2024-25 ನೇ ಸಾಲಿನ ಪಿ.ಸಿ.ಎಂ.ಸಿ. ವಿಭಾಗದ ವಸತಿ ನಿಲಯ ವಿದ್ಯಾರ್ಥಿಗಳ ಪಾಲಕರ-ಶಿಕ್ಷಕರ  ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಗ್ರಾಮೀಣ ಭಾಗದಲ್ಲಿ ವಿದ್ಯಾ ಸಂಸ್ಥೆಯನ್ನು ಹುಟ್ಟುಹಾಕುವುದರ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಪೋಷಿಸಿ ಬೆಳೆಸುವ ಮನಸ್ಸಿನಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ದೀಪಾ ಎಂ. ಹೆಗ್ಡೆ ಪಣ ತೊಟ್ಟಿದ್ದೇವೆ ಎಂದು ಮಹೇಶ್ ಹೆಗ್ಡೆ ಹೇಳಿದರು.
ಅಲ್ಲದೆ ತಮ್ಮ ಸಂಸ್ಥೆಯಲ್ಲಿರುವ ಬೋಧಕ ಸಿಬ್ಬಂದಿ ವರ್ಗ, ನಿರಂತರವಾಗಿ ನಡೆಯುವ ತರಗತಿಗಳು, ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಹಾಗೂ ಸಂಸ್ಥೆಯಲ್ಲಿ ನಡೆಯುವ ವಿವಿಧ ಸವಲತ್ತುಗಳ  ಬಗ್ಗೆ ಸವಿಸ್ತಾರವಾಗಿ  ತಿಳಿಸಿದರು.

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆಡಳಿತ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯವೈಖರ್ಯ ಕುರಿತು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ನೀಡಿ ಪರೀಕ್ಷಾ ಫಲಿತಾಂಶ, ಪರೀಕ್ಷಾ ತಯಾರಿ, ಉಪನ್ಯಾಸಕರ ಮಾರ್ಗದರ್ಶನ ಕಾಲೇಜ್ ವಸತಿ ನಿಲಯದಲ್ಲಿ ದೊರೆಯುವ ವಿವಿಧ ಸವಲತ್ತುಗಳು, ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ, ಮಕ್ಕಳಿಗೆ ಮನರಂಜನೆಗಳು, ಧಾರ್ಮಿಕ ಹಬ್ಬಗಳ ಆಚರಣೆ ಮತ್ತು ಸಂಸ್ಥೆಯ ವಿಶೇಷತೆಗಳ ಬಗ್ಗೆ ಸ್ಥೂಲವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ PCMC ವಿಭಾಗದ ಮುಖ್ಯಸ್ಥರಾಗಿರುವ  ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಮೇಡಂ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ  ರಜಿನಿ ಮೇಡಂ, ರಸಾಯನಶಾಸ್ತ್ರದ ಮುಖ್ಯಸ್ಥ ಶ್ರೀ ಹರಿ ಶರ್ಮ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಝಹಿರ್ ಅಬ್ಬಾಸ್ ಇವರುಗಳು ವಿದ್ಯಾರ್ಥಿಗಳ ಯಶಸ್ವಿಗೆ ಮುನ್ನುಡಿಯಾಗಿ ಪ್ರಸ್ತುತ ಶೈಕ್ಷಣಿಕ ವರ್ಷದ ಪಠ್ಯ ವಿಷಯಗಳ ಬಗ್ಗೆ ತಮ್ಮ  ಯೋಜನೆ, ಯೋಚನೆಗಳನ್ನು ಪಾಲಕರಿಗೆ,ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಭಾಗಿಯಾಗಿದ್ದರು.
ಅಧ್ಯಾಪಕ ಶ್ರೀನಿವಾಸ ವೈದ್ಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.