ಡೈಲಿ ವಾರ್ತೆ: 12/ಮಾರ್ಚ್ /2025

ಕಾಪು| ಸ್ಕೂಟಿಗೆ ಅಪರಿಚಿತ ವಾಹನ ಢಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು, ಮಂಗಳಪೇಟೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ಮಾ.11ರ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ಕಾಪು ನಿವಾಸಿ ಪ್ರತೀಶ್ ಪ್ರಸಾದ್ (21) ಮೃತಪಟ್ಟ ಸವಾರ. ಮತ್ತೋರ್ವ ಸವಾರ ನಿಹಾಲ್ ವಿಲ್ಸನ್ ತೀವ್ರ ಗಾಯಗೊಂಡಿದ್ದಾರೆ.

ಮಂಗಳವಾರ ಮಧ್ಯರಾತ್ರಿ ಕಾಪುವಿನಿಂದ ಪಡುಬಿದ್ರಿ ಕಡೆಗೆ ತೆರಳುತ್ತಿದ್ದ ಸ್ಕೂಟಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ದೂರುದಾರ ರಿತೇಶ್ ಶೆಟ್ಟಿ ಎಂಬವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸ್ಕೂಟಿ ಸಮೇತ ಕೆಳಗೆ ಬಿದ್ದು ತೀವ್ರ ಗಾಯಗೊಂಡು ನರಳಾಡುತ್ತಿದ್ದ ಪ್ರತೀಶ್ ಮತ್ತು ನಿಹಾಲ್ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಪ್ರತೀಶ್‌ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೃತ ಯುವಕ ಪ್ರತೀಶ್ ಪ್ರಸಾದ್ ಕಾಪುವಿನ ಹಿರಿಯ ಛಾಯಾಗ್ರಾಹಕ ಭಕ್ತಪ್ರಸಾದ್ ಮತ್ತು ಉಷಾ ಭಕ್ತಪ್ರಸಾದ್ ದಂಪತಿಯ ಸುಪುತ್ರ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.