



ಡೈಲಿ ವಾರ್ತೆ: 04/JUNE/2025


RCB ಅಭಿಮಾನಿಗಳ ಕಾಲ್ತುಳಿತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ – ಸಿಎಂ

ಬೆಂಗಳೂರು: ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭಾರಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿದ್ದು, ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ ನಡೆಸಿದರು.
ಪ್ರಕರಣದಲ್ಲಿ 11 ಮಂದಿ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ ಎಂದು ಸಿಎಂ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ ಅವರು, ಗಾಯಾಳುಗಳಿಗೆ ಸರ್ಕಾರದಿಂದಲೇ ಉಚಿತ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಇದೊಂದು ಅನಿರೀಕ್ಷಿತ ಘಟನೆ ಎಂದು ವಿಷಾಧಿಸಿದ ಅವರು, ಸಂಭ್ರಮಾಚರಣೆಗೆ ಇದ್ದಕ್ಕಿದ್ದಂತೆ ಲಕ್ಷಾಂತರ ಜನರು ಬಂದಿದ್ದರಿಂದ ಹೀಗಾಗಿದೆ ಎಂದು ಅವರು ಹೇಳಿದರು. ಈ ಘಟನೆ ಆಗಬಾರದಾಗಿತ್ತು ಎಂದು ಹೇಳಿದರು.
ಮ್ಯಾಜಿಸ್ಟೇಟ್ ತನಿಖೆ: ಈ ಘಟನೆಯ ಬಗ್ಗೆ ಮ್ಯಾಜಿಸ್ಟೇಟ್ ತನಿಖೆ ನಡೆಸಲಾಗುವುದು. ಈ ದುರುಂತ ಆಗಬಾರದಾಗಿತ್ತು, ಆದರೆ ನಡೆದು ಹೋಗಿದೆ ಎಂದರು. ಸರ್ಕಾರ ಭದ್ರತೆ ಕೊಡಬೇಕು. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರು ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.
ತನಿಖೆ ನಡೆಸಲು 15 ದಿನ ಕಾಲಾವಕಾಶ: ಡಿಸಿ ನೇತೃತ್ವದಲ್ಲಿ ಮ್ಯಾಜಿಸ್ಟಿರಿಯಲ್ ತನಿಖೆ ನಡೆಸಲು ತೀರ್ಮಾನ ಮಾಡಲಾಗಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ವಹಿಸಲಾಗುತ್ತದೆ. ತನಿಖೆ ನಡೆಸಲು 15 ದಿನ ಕಾಲಾವಕಾಶ ನೀಡಲಾಗಿದೆ ಎಂದು ಸಿಎಂ ಹೇಳಿದರು.
ನಾನು ರಾಜಕೀಯ ಮಾಡಲು ಬಯಸಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಭದ್ರತಾ ವೈಫಲ್ಯನಾ, ಬೇರೆ ಕಾರಣನಾ ಎಂಬುದಲ್ಲಿ ತನಿಖೆಯಲ್ಲಿ ಗೊತ್ತಾಗುತ್ತದೆ. ಈ ಮುಂಚೆನೂ ಹಲವು ಕಡೆ ಕಾಲ್ತುಳಿತ ನಡೆದಿವೆ. ಈ ದುರಂತಕ್ಕೆ ನಾವು ದುಃಖ ವ್ಯಕ್ತಪಡಿಸಿದ್ದೇವೆ. ಈ ಘಟನೆ ಆಗಬಾರದಿತ್ತು, ಆದರೆ ಆಗಿದೆ. ಬೆಂಗಳೂರಿ ಎಲ್ಲ ಕಡೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು ಎಂದು ಸಿಎಂ ಹೇಳಿದರು.
ರಾತ್ರಿವರೆಗೆ ಕೂಡ ಐಪಿಎಲ್ ಫೈನಲ್ ನಡೆದಿತ್ತು. ವಿಜಯೋತ್ಸವ ಆಚರಣೆ ಮಾಡಲು ಕ್ರಿಕೆಟ್ ಅಸೋಸಿಯೇಷನ್ ಅವರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ್ಕಾರದಿಂಸಲೂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೊಡ್ಡ ದುರಂತ ನಡೆದಿದೆ. ಜನ ಕಾಲ್ತುಳಿತಕ್ಕೆ ಒಳಗಾಗಿ 11 ಜನ ಮೃತ ಪಟ್ಟಿದ್ದಾರೆ. 33 ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿದ್ದಾರೆ.
ನಿರೀಕ್ಷೆಗೂ ಮೀರಿ ಜನ ಸೇರಿದ್ದೇ ದುರಂತಕ್ಕೆ ಕಾರಣ: ಬೋರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಂಭ್ರಮಾಚರಣೆ ಮಾಡುವಾಗ ಇಂಥ ದುರಂತ ನಡೆಯಬಾರದಿತ್ತು. ಸರ್ಕಾರ ಇದಕ್ಕೋಸ್ಕರ ಬಹಳ ದುಖ: ವ್ಯಕ್ತಪಡಿಸುತ್ತದೆ. ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರು. ವಿಧಾನಸೌಧ ಎದರು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ವಿಧಾನಸೌಧ ಮುಂದೆ ನಡೆದ ಸಮಾರಂಭದಲ್ಲಿ ಅನಿರೀಕ್ಷಿತ ದುರಂತ ನಡೆದಿಲ್ಲ. ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ದುರಂತ ಆಗಿದೆ ಎಂದು ಸಿಎಂ ಹೇಳಿದರು.
ಚಿಕಿತ್ಸೆ ಪಡೆದು ಡಿಚಾರ್ಜ್ ಆದವರು ಸೇರಿ ಘಟನೆಯಲ್ಲಿ ಸುಮಾರು 47 ಜನ ಒಟ್ಟು ಗಾಯಾಳುಗಳಾಗಿದ್ದಾರೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಹೇಳಿದರು.