



ಡೈಲಿ ವಾರ್ತೆ: 14/ಆಗಸ್ಟ್/ 2025


ರೈತನಿಂದ 20 ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ, ಬಿಲ್ ಕಲೆಕ್ಟರ್!

ಕೆ.ಆರ್.ಪೇಟೆ: ಇ-ಸ್ವತ್ತು ಮಾಡಿಕೊಡಲು ರೈತನಿಂದ 20 ಸಾವಿರ ರೂ ಲಂಚ ಪಡೆಯುವಾಗ ತಾಲೂಕಿನ ಮುರುಕನಹಳ್ಳಿ ಪಿಡಿಒ ಸಯ್ಯದ್ ಮುಜಾಕಿರ್ ಹಾಗೂ ಬಿಲ್ ಕಲೆಕ್ಟರ್ ನಾಗೇಶ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಹೊನ್ನೇನಹಳ್ಳಿ ಗ್ರಾಮದ ಕಾಂತರಾಜು ಮತ್ತು ದೇವರಾಜು ಅವರು ತಮ್ಮ ತಂದೆಯಿಂದ ಬಂದ ಮನೆಯನ್ನು ವಿಭಾಗಪತ್ರ ಮಾಡಿಸಿಕೊಂಡು ಈ ವಿಭಾಗದ ಪತ್ರದಂತೆ ಖಾತೆ ಮಾಡಿಕೊಂಡುವಂತೆ ಕಾಂತರಾಜು ಜುಲೈ 30ರಂದು ಪಿಡಿಒ ಸಯ್ಯದ್ ಮುಜಾಕಿರ್ಗೆ ಅರ್ಜಿ ಸಲ್ಲಿಸಿದ್ದಾರೆ.
ಆಗ ಇ-ಸ್ವತ್ತು ಮತ್ತು ಖಾತೆ ಬೇಗ ಮಾಡಿಕೊಡಲು 50 ಸಾವಿರ ರು ನೀಡಬೇಕು ಎಂದು ಕೇಳಿದ್ದಾರೆ. ಆ.4ರಂದು ಮತ್ತೆ ಗ್ರಾಪಂ ಕಚೇರಿಗೆ ಬಂದ ಕಾಂತರಾಜು 50 ಸಾವಿರ ರು. ಕೊಡಲು ನನ್ನಿಂದ ಸಾಧ್ಯವಿಲ್ಲ ಸಾರ್.
ಕಡಿಮೆ ಮಾಡಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ ಆಗ 40 ಸಾವಿರಕ್ಕೆ ಒಪ್ಪಂದ ಮಾಡಿಕೊಂಡು ಬಂದು 20 ಸಾವಿರ ರೂಗಳನ್ನು 10 ದಿನದೊಳಗೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಪಿಡಿಒ ಲಂಚಕ್ಕೆ ಬೇಡಿಕೆ ಇಡುವ ಸಂಭಾಷಣೆಯ ವಾಯ್ಸ್ ರೆಕಾರ್ಡ್ ಮಾಡಿಕೊಂಡು ಬಂದು ಮಂಡ್ಯದ ಲೋಕಾಯಕ್ತ ಎಸ್.ಪಿ ಸುರೇಶ್ ಬಾಬು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಈ ದೂರಿನ ಮೇರೆಗೆ ಸುರೇಶ್ ಬಾಬು ಅವರ ನಿರ್ದೇಶನದ ಮೇರೆಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯ ಗೌಡ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ದಾಳಿ ನಡೆಸಿ ಹೊನ್ನೇನಹಳ್ಳಿ ಕಾಂತರಾಜು ಎಂಬ ರೈತನಿಂದ 20 ಸಾವಿರ ರೂ ಪಡೆಯುತ್ತಿದ್ದಾಗ ದಾಳಿ ನಡೆಸಿ ಪಿಡಿಒ ಸಯ್ಯದ್ ಮುಜಾಕಿರ್ ಮತ್ತು ಬಿಲ್ ಕಲೆಕ್ಟರ್ ನಾಗೇಶ್ ಅವರನ್ನು 20 ಸಾವಿರ ರು. ಸಮೇತ ಬಂಧಿಸಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಸಿಬ್ಬಂದಿ ಶಂಕರ್, ಸಿದ್ದಲಿಂಗಸ್ವಾಮಿ, ದಿನೇಶ್, ಶರತ್, ಮಹದೇವ್, ಮತ್ತಿತರರು ಭಾಗವಹಿಸಿದ್ದರು.