

ಡೈಲಿ ವಾರ್ತೆ: ಮಾ./01/2026

ಕರ್ತವ್ಯದ ಹಾದಿಯಲ್ಲೇ ಇಹಲೋಕ ತ್ಯಜಿಸಿದ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್

ಉಡುಪಿ: ಸಾರ್ವಜನಿಕರ ಸ್ವಾಸ್ಥ್ಯ ಮತ್ತು ಸುರಕ್ಷತೆಯ ಆಶಯದೊಂದಿಗೆ ಆಯೋಜಿಸಲಾಗಿದ್ದ “ಫಿಟ್ನೆಸ್” ಅಭಿಯಾನವೊಂದು ಇಂದು ದುರಂತದಲ್ಲಿ ಅಂತ್ಯಗೊಂಡಿದೆ.
ಉಡುಪಿ ಜಿಲ್ಲಾ ಪೊಲೀಸರು ಹಮ್ಮಿಕೊಂಡಿದ್ದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಹಾಗೂ “ಡ್ರಗ್ಸ್ ಫ್ರೀ ಕರ್ನಾಟಕ” ಓಟದ ಸಂದರ್ಭದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಘಟನೆಯ ವಿವರ:
ಇಂದು ಬೆಳಿಗ್ಗೆ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಾಗೃತಿ ಓಟದಲ್ಲಿ ನಾಸೀರ್ ಹುಸೇನ್ ಅವರು ಉತ್ಸಾಹದಿಂದ ಭಾಗವಹಿಸಿದ್ದರು. ಸಮಾಜಕ್ಕೆ ಆರೋಗ್ಯ ಮತ್ತು ಮಾದಕದ್ರವ್ಯ ಮುಕ್ತ ಕರ್ನಾಟಕದ ಸಂದೇಶ ನೀಡುವ ಉದ್ದೇಶದಿಂದ ಓಡುತ್ತಿದ್ದ ಸಂದರ್ಭದಲ್ಲಿ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ನಾಸೀರ್ ಹುಸೇನ್ ಅವರು ಕೇವಲ ಒಬ್ಬ ದಕ್ಷ ಅಧಿಕಾರಿಯಾಗಿರದೆ, ಇಲಾಖೆಯ ಪ್ರತಿಯೊಂದು ರಚನಾತ್ಮಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. “ಸಾರ್ವಜನಿಕರ ಸೇವೆಗಾಗಿ ಸದಾ ಸನ್ನದ್ಧ” ಎಂಬ ಪೋಲೀಸ್ ಇಲಾಖೆಯ ಧ್ಯೇಯವಾಕ್ಯವನ್ನು ಅವರು ತಮ್ಮ ಕೊನೆಯ ಕ್ಷಣದವರೆಗೂ ಪಾಲಿಸಿದ್ದಾರೆ.
ವಯೋಮಾನದ ಪೊಲೀಸ್ ಸಿಬ್ಬಂದಿಗಳ ಫಿಟ್ನೆಸ್ ಕ್ರಮಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ:
ಪೊಲೀಸ್ ಇಲಾಖೆಯಲ್ಲಿ 40 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ಕಠಿಣ ಓಟ ಮತ್ತು ತೀವ್ರ ಫಿಟ್ನೆಸ್ ತರಬೇತಿಗಳಿಗೆ ಒಳಪಡಿಸುವುದು ಅವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಚಿಂತನೆ ವ್ಯಕ್ತವಾಗುತ್ತಿದೆ.
ಪೊಲೀಸ್ ಇಲಾಖೆಯ ಕರ್ತವ್ಯಗಳು ಸ್ವಭಾವತಃ ದೈಹಿಕ ಹಾಗೂ ಮಾನಸಿಕ ಒತ್ತಡಗಳಿಂದ ಕೂಡಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ವಯಸ್ಸಾದ ಸಿಬ್ಬಂದಿಗಳ ದೈಹಿಕ ಸಾಮರ್ಥ್ಯ, ಆರೋಗ್ಯ ಸ್ಥಿತಿ ಮತ್ತು ವೈದ್ಯಕೀಯ ಸಲಹೆಗಳನ್ನು ಪರಿಗಣಿಸದೆ ಕಡ್ಡಾಯ ಫಿಟ್ನೆಸ್ ಪರೀಕ್ಷೆಗಳು ಅಥವಾ ತೀವ್ರ ತರಬೇತಿಗಳನ್ನು ಜಾರಿಗೊಳಿಸುವುದು ಅಪಾಯಕಾರಿ ಆಗಬಹುದು. ಹೃದಯ, ರಕ್ತದೊತ್ತಡ ಹಾಗೂ ಇತರ ಆರೋಗ್ಯ ಸಮಸ್ಯೆಗಳ ಹಿನ್ನೆಲೆ ನೋಡಿದರೆ, ವಯಸ್ಸಿನ ಆಧಾರದ ಮೇಲೆ ಸೂಕ್ತ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು ಅಗತ್ಯವಾಗಿದೆ.
ಉನ್ನತ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವೈದ್ಯಕೀಯ ತಪಾಸಣೆ ನಂತರವೇ ಫಿಟ್ನೆಸ್ ಪರೀಕ್ಷೆ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಪೊಲೀಸರ ಆರೋಗ್ಯವೇ ಇಲಾಖೆಯ ಬಲ ಎಂಬುದನ್ನು ಮನನ ಮಾಡಿಕೊಳ್ಳಬೇಕಾಗಿದೆ.