ಡೈಲಿವಾರ್ತೆ: 02/ಮೇ/2026

ನಂಬಿದವರ ಕೈಬಿಡದ ಕಳಿಬೈಲು ಕೊರಗಜ್ಜ: ಕಳವಾದ ಚಿನ್ನದ ಒಡವೆಗಳು ಮೂರೇ ದಿನದಲ್ಲಿ ವಾಪಸ್!

​ಕೋಟ: ದೈವಶಕ್ತಿಯ ಪವಾಡಗಳು ಇಂದಿಗೂ ಜೀವಂತ ಎಂಬುದಕ್ಕೆ ಸಾಸ್ತಾನ ಕೆಳಬೆಟ್ಟು ಮೂಡುಹಡುವಿನ ಕಳಿಬೈಲು ಕೊರಗಜ್ಜನ ಸನ್ನಿಧಾನದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.
ಮದುವೆ ಸಮಾರಂಭವೊಂದರ ಸಂದರ್ಭದಲ್ಲಿ ಕಳವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ದೈವದ ಮೊರೆ ಹೋದ ಮೂರೇ ದಿನಗಳಲ್ಲಿ ಪತ್ತೆಯಾಗುವ ಮೂಲಕ ಭಕ್ತರಲ್ಲಿ ಆಸ್ತಿಕತೆಯನ್ನು ಇಮ್ಮಡಿಗೊಳಿಸಿದೆ.

​ಘಟನೆಯ ಹಿನ್ನೆಲೆ:
​ಬ್ರಹ್ಮಾವರ ತಾಲೂಕಿನ ಸಾಸ್ತಾನ ಕೋಡಿ ಕುಟುಂಬವೊಂದು ಏಪ್ರಿಲ್ 29ರಂದು ನೆರೆಮನೆಯ ಮದುವೆ ಸಮಾರಂಭಕ್ಕೆ ತೆರಳಿತ್ತು. ಈ ಬಿಡುವನ್ನು ಬಳಸಿಕೊಂಡ ಕಳ್ಳರು, ಮನೆಯ ಒಳನುಗ್ಗಿ ಕಪಾಟಿನಲ್ಲಿದ್ದ ಒಂದು ಜೊತೆ ಬೆಂಡೋಲೆ, ಕರಿಮಣಿ ಸರ ಹಾಗೂ ಚಿನ್ನದ ಚೈನ್ ಸೇರಿದಂತೆ ಒಟ್ಟು ಮೂರುವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದರು. ಮದುವೆ ಮುಗಿಸಿ ಮನೆಗೆ ಮರಳಿದ ಕುಟುಂಬಸ್ಥರು, ಕಳ್ಳತನದ ದೃಶ್ಯ ಕಂಡು ಕಂಗೆಟ್ಟಿದ್ದರು.

​ದೈವದ ಸನ್ನಿಧಾನದಲ್ಲಿ ಮೊರೆ:
​ಕಳವಾದ ಆಭರಣಗಳ ಬಗ್ಗೆ ಹತಾಶರಾಗಿದ್ದ ಕುಟುಂಬಕ್ಕೆ, ಕೊರಗಜ್ಜನ ಭಕ್ತರೊಬ್ಬರು ಸಾಸ್ತಾನದ ಕಳಿಬೈಲು ಕೊರಗಜ್ಜನ ಸನ್ನಿಧಾನಕ್ಕೆ ಹೋಗಲು ಸಲಹೆ ನೀಡಿದರು. ಅದರಂತೆ ಸಂತ್ರಸ್ತ ಕುಟುಂಬವು ಸನ್ನಿಧಾನಕ್ಕೆ ಬಂದು ದೂರು ನೀಡಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಅಭಿಜಿತ್ ಪಾಂಡೇಶ್ವರ ಅವರು ಕುಟುಂಬಕ್ಕೆ ಧೈರ್ಯ ತುಂಬುತ್ತಾ, “ಕಳವಾದ ಚಿನ್ನವು ಏಳು ದಿನಗಳ ಒಳಗಾಗಿ ನಿಮ್ಮ ಮಡಿಲು ಸೇರಲಿದೆ” ಎಂಬ ದೈವನುಡಿಯನ್ನು ನೀಡಿದರು. ಅಲ್ಲದೆ, ಕಾನೂನಾತ್ಮಕವಾಗಿ ಪೊಲೀಸ್ ದೂರು ನೀಡುವಂತೆಯೂ ಸೂಚಿಸಿದ್ದರು.

ಮೂರೇ ದಿನದಲ್ಲಿ ನಡೆದ ಪವಾಡ:
​ದೈವದ ಅಭಯವಾಣಿಯಂತೆ ಪವಾಡವೊಂದು ಸಂಭವಿಸಿದೆ. ಏಪ್ರಿಲ್ 29ರಂದು ಕಳವಾಗಿದ್ದ ಆಭರಣಗಳು, ಮೇ 1ರಂದು ಕಳವಾದ ಮನೆಯ ಪಕ್ಕದ ಮನೆಯ ಜಗಲಿಯ ಮೇಲೆ ಪತ್ತೆಯಾಗಿವೆ. ದೈವದ ಶಕ್ತಿಗೆ ಬೆದರಿದ ಕಳ್ಳರು ಆಭರಣಗಳನ್ನು ಅಲ್ಲಿಯೇ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.
​ನಂಬಿದ ಭಕ್ತರನ್ನು ಕೊರಗಜ್ಜ ಎಂದೂ ಕೈಬಿಡುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದೈವದ ಶಕ್ತಿ ಅಪಾರ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

​ಮರಳಿ ಚಿನ್ನಾಭರಣಗಳನ್ನು ಪಡೆದ ಕುಟುಂಬವು ಕಳಿಬೈಲು ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಕೊರಗಜ್ಜ ಹಾಗೂ ಪರಿವಾರ ದೈವಗಳಿಗೆ ಭಕ್ತಿಯ ಕೃತಜ್ಞತೆಗಳನ್ನು ಸಮರ್ಪಿಸಿದೆ.