ಡೈಲಿವಾರ್ತೆ:16/ಆಗಸ್ಟ್ /2026

ಪಂಚವರ್ಣ ವತಿಯಿಂದ 313ನೇ ವಾರದ ಪರಿಸರಸ್ನೇಹಿ ಹಸಿರು ಹೆಜ್ಜೆ ಅಭಿಯಾನ: ಪರಿಸರ ಜಾಗೃತಿಯಲ್ಲಿ ಮನುಕುಲ ಎಡೆವಿದೆ -ಶಿವಮೂರ್ತಿ.ಕೆ

ಕೋಟ: ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ಮಾನವನಿಂದಾಗುತ್ತಿದೆ ಇದರಿಂದ ಸಾಕಷ್ಟು ವಾತಾವರಣ ವೈಪರೀತ್ಯಗಳು ಗುಡ್ಡ ಕುಸಿತ ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಮನುಕುಲ ಪದೆ ಪದೆ ಪರಿಸರ ಜಾಗೃತಿಯಲ್ಲಿ ಎಡೆವುತ್ತಿದ್ದಾನೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳು ಇದಕ್ಕಿಂತ ಭೀಕರತೆ ಎದುರಿಸಲಿದ್ದೇವೆ ಈ ಹಿನ್ನೆಲೆಯಲ್ಲಿ ಈಗಿಂದಿಗಲೆ ನಾವುಗಳು ಕಾರ್ಯಪ್ರವೃತ್ತರಾಗಿ ನಮ್ಮ ಪರಿಸರವನ್ನು ಹಸಿರುಯುಕ್ತವಾಗಿಸುವಂತೆ ಮಾಡಬೇಕು ಎಂದು ಕೆ.ಎಂ ಎಫ್ ನಿರ್ದೇಶಕ ಶಿವಮೂರ್ತಿ ಕೆ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ಅನ್ನಪೂರ್ಣ ನರ್ಸರಿ ಪೇತ್ರಿ, ಇವರ ಸಹಯೋಗದೊಂದಿಗೆ ಕೋಟತಟ್ಟು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲು ಉತ್ಪಾದಕರ ಸಹಕಾರಿ ಸಂಘ ಕೋಟತಟ್ಟು ಇವರ ಸಂಯೋಜನೆಯೊಂದಿಗೆ 313ನೇ ವಾರದ ಪರಿಸರಸ್ನೇಹಿ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗಿಡ ಹಸ್ತಾಂತರಿಸಿ ಮಾತನಾಡಿ ಪಂಚವರ್ಣದಂತಹ ಸಂಘಟನೆಗಳು ಊರು ಕೇರಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಂಡು ಪರಿಸರಪ್ರೇಮ ಸಾಮಾಜಿಕ ಕಾರ್ಯ ಮತ್ತಷ್ಟು ಮೇಳೈಸುವಂತ್ತಾಗಲಿ ಎಂದು ಹಾರೈಸಿದರು.

ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಪರಿಸರ ಜಾಗೃತಿ ಪ್ರತಿಜ್ಞಾವಿಧಿ ಭೋದಿಸಿ ಪರಿಸರದ ಬಗ್ಗೆ ಮಾಹಿತಿ ನೀಡಿದರು.ಇದೇ ವೇಳೆ ವಿದ್ಯಾರ್ಥಿಗಳಿಗೆ ಗಿಡವನ್ನು ವಿತರಿಸಿ ಸೇಲ್ಫಿ ಕಳುಹಿಸಿ ಬಹುಮಾನ ಗೆಲ್ಲಿ ಎಂಬ ಮಾಹಿತಿಯನ್ನು ಸಂಘದ ವತಿಯಿಂದ ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನುಶಾಲಾ ಮುಖ್ಯ ಶಿಕ್ಷಕ ಗಣೇಶ್ ಆಚಾರ್ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುಲೇಮಾನ್ ಸಾಹೇಬ್, ಕೋಟತಟ್ಟು ಪಂಚಾಯತ್ ಮಾಜಿ ಸದಸ್ಯೆ ವಿದ್ಯಾ ಸಾಲಿಯಾನ್ , ಸಂಜೀವಿನಿ ಒಕ್ಕೂಟದ ಸುಜಾತ ಉದಯ್,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಇದ್ದರು.

ಮಹಿಳಾ ಮಂಡಲದ ವಸಂತಿ ಹಂದಟ್ಟು ಸ್ವಾಗತಿಸಿದರೆ, ಪ್ರಭಾಕರ್ ಬಿಎಸ್‌ಎನ್ ಎಲ್ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.ಪಂಚವರ್ಣ ಯುವಕ ಮಂಡಲ ಉಪಾಧ್ಯಕ್ಷ ದಿನೇಶ್ ಆಚಾರ್ ಸಹಕರಿಸಿದರು.