ಡೈಲಿವಾರ್ತೆ: 09/ಜೂ./2026

ಹೆಬ್ರಿ: ಇಸ್ಪೀಟ್ ಜುಗಾರಿ ಅಡ್ಡೆಗೆ ಪೋಲಿಸ್ ದಾಳಿ – ಏಳು ಮಂದಿ ಆರೋಪಿಗಳ ಬಂಧನ, ವಾಹನಗಳು ವಶಕ್ಕೆ

ಹೆಬ್ರಿ, ಜೂನ್ 9: ಹೆಬ್ರಿ ತಾಲೂಕಿನ ಹೊಸೂರು ಪ್ರದೇಶದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ದಾಳಿಯ ವೇಳೆ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಇದೀಗ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಜೂನ್ 6ರಂದು ಸಂಜೆ ಹೊಸೂರು ಗ್ರಾಮದ ನಿರ್ಜನ ಪ್ರದೇಶದಲ್ಲಿ ಇಸ್ಪೀಟ್ ಎಲೆಗಳ ಮೂಲಕ ಅಂದರ್-ಬಾಹರ್ ಜೂಜಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಕಾರ್ಕಳ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಚಪ್ಪರ ನಿರ್ಮಿಸಿ ಅದರ ಮೇಲೆ ಟರ್ಪಾಲ್ ಹಾಸಿ, ವಿದ್ಯುತ್ ಬಲ್ಬ್ ಅಳವಡಿಸಿಕೊಂಡು ಟೇಬಲ್ ಸುತ್ತ ಕುಳಿತು ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದರು.


ದಾಳಿಯ ವೇಳೆ ಮಂಗಳೂರು ಜಪ್ಪಿನ ಮೊಗರು ನಿವಾಸಿ ವಿಜೇಶ್ ಕುಮಾರ (40), ಮೂಲ್ಕಿ ಕಾರ್ನಾಡಿನ ದಸ್ತಗೀರ್ (33) ಹಾಗೂ ಕುಡುಪು ಗ್ರಾಮದ ರೋಹಿತ್ (34) ಸೇರಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ ಜೂಜಾಟಕ್ಕೆ ಬಳಸಲಾಗಿದ್ದ ₹23,970 ನಗದು, ಸುಮಾರು ₹35,000 ಮೌಲ್ಯದ ಐದು ಮೊಬೈಲ್ ಫೋನ್‌ಗಳು, ಇಸ್ಪೀಟ್ ಕಾರ್ಡ್‌ಗಳು, ಟೇಬಲ್, ಕುರ್ಚಿಗಳು, ವಿದ್ಯುತ್ ಬೆಳಕಿಗೆ ಬಳಸಿದ ಬ್ಯಾಟರಿ ಮತ್ತು ಇತರೆ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಇದಲ್ಲದೆ ಜೂಜಾಟದ ಸ್ಥಳಕ್ಕೆ ಆಗಮಿಸಲು ಬಳಸಲಾಗಿದ್ದ ಮೂರು ಕಾರುಗಳು, ಎರಡು ಮೋಟಾರ್ ಸೈಕಲ್‌ಗಳು ಹಾಗೂ ಒಂದು ಸ್ಕೂಟರ್‌ನ್ನು ಸಹ ಜಪ್ತಿ ಮಾಡಲಾಗಿದೆ.


ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ದಾಳಿಯ ವೇಳೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಕಾರ್ಕಳ ಕುಕ್ಕೂಂದೂರು ಗ್ರಾಮದ ವಿಜಯ (39), ಜಾರ್ಕಳದ ಮಹೇಶ್ (26), ಉಡುಪಿ ಉದ್ಯಾವರದ ಕಿಶೋರ್ ಕುಮಾರ್ (46) ಹಾಗೂ ಕಾರ್ಕಳ ಜೋಡುರಸ್ತೆಯ ಸಂತೋಷ್ ಆಚಾರ್ಯ (35) ಅವರನ್ನು ಬಂಧಿಸಿ ನ್ಯಾಯಾಂಗ ಕ್ರಮ ಕೈಗೊಂಡಿದ್ದಾರೆ.


ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 27/26 ದಾಖಲಿಸಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 80 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 112ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸಲಾಗುತ್ತಿದೆ.