


ಡೈಲಿವಾರ್ತೆ: 12/ಜು./2026


ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪ 2022ರ ಜುಲೈ 26 ರಂದು ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಹಾಗೂ ಕೋಳಿ ಅಂಗಡಿ ವ್ಯವಹಾರ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು(32) ಎಂಬವರ ಹತ್ಯೆ ಪ್ರಕರಣದಲ್ಲಿದ್ದು ನಾಲ್ಕು ವರ್ಷಗಳಿಂದ ತಲೆಮರಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ರಾಷ್ಟ್ರೀಯ ತನಿಖಾ ದಳ(NIA) ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ನೌಶಾದ್ (32) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ಚೌಡ್ಲಿ ಕಾನ್ವೆಂಟ್ ರಸ್ತೆ ನಿವಾಸಿ ಅಬ್ದುಲ್ ನಾಸಿರ್ (41) ಎಂದು ಗುರುತಿಸಲಾಗಿದೆ.
ಈ ಆರೋಪಿಗಳನ್ನು NIA ಅಧಿಕಾರಿಗಳು ಜುಲೈ 11 ರಂದು ಕ್ರಮವಾಗಿ ಬೆಂಗಳೂರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ.
ಆರೋಪಿ ನೌಶಾದ್ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಆರೋಪಿಗಳು ಪರಾರಿಯಾಗಲು ಕಾರು ಚಾಲಕನಾಗಿ ನೆರವು ನೀಡಿದ್ದಾನೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಈವರೆಗೆ ಒಟ್ಟು 28 ಆರೋಪಿಗಳ ಪೈಕಿ 23 ಮಂದಿಯನ್ನು ಬಂಧಿಸಲಾಗಿದ್ದು ಇನ್ನೂ ಐವರು ತಲೆಮರೆಸಿಕೊಂಡಿದ್ದಾರೆ.
ತಲೆಮರೆಸಿಕೊಂಡಿದ್ದ ನೌಶಾದ್ ಹಾಗೂ ಅಬ್ದುಲ್ ನಾಸಿರ್ ಪತ್ತೆಗೆ ಸಹಕರಿಸುವವರಿಗೆ 2 ಲಕ್ಷ ಬಹುಮಾನ ಘೋಷಿಸಿ NIA ವ್ಯಾಪಕ ಶೋಧ ಕಾರ್ಯ ನಡೆಸುತ್ತಿತ್ತು.
ಇದೀಗ ಇಬ್ಬರ ಬಂಧನದೊಂದಿಗೆ ತನಿಖೆಗೆ ಮತ್ತಷ್ಟು ಪುಷ್ಠಿ ದೊರೆತಿದೆ. ಅಲ್ಲದೆ ಉಳಿದ ಆರೋಪಿಗಳ ಬಂಧನಕ್ಕಾಗಿ NIA ಕಾರ್ಯಾಚರಣೆ ಮುಂದುವರಿದಿದೆ.