ಡೈಲಿ ವಾರ್ತೆ : 29 ಜೂನ್ 2022

ಬೆಂಗಳೂರು: ಕೊಟ್ಟ ಸಾಲವನ್ನು ಹಿಂದಿರುಗಿಸದಿರುವುದಕ್ಕೆ ಮಹಿಳೆಯರ ಬಟ್ಟೆ ಬಿಚ್ಚಿ ಅವಮಾನಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ರವಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ

ದೊಮ್ಮಸಂದ್ರದ ನೆರಿಗಾ ಗ್ರಾಮದ ನಿವಾಸಿ ಸುಬ್ಬಾರೆಡ್ಡಿಯ ಪುತ್ರಿಯರಾದ ಶಾಂತಿಪ್ರಿಯ ಮತ್ತು ಭಾನುಪ್ರಿಯ ಅವರ ಮೇಲೆ ದೌರ್ಜನ್ಯ ನಡೆದಿದೆ.

ಇದೇ ಗ್ರಾಮದ ನಿವಾಸಿಗಳಾದ ರಾಮಕೃಷ್ಣ ರೆಡ್ಡಿ-ಇಂದ್ರಮ್ಮ ಅವರ ಪುತ್ರ ಸುನಿಲ್ ಕುಮಾರ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಶಾಂತಿಪ್ರಿಯ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಮಕೃಷ್ಣ ರೆಡ್ಡಿಯಿಂದ ಒಂದು ವರ್ಷದ ಹಿಂದೆ ಶೇಕಡ 30ರ ಬಡ್ಡಿದರದಲ್ಲಿ 1 ಲಕ್ಷ ರೂ. ಸಾಲವನ್ನು ಪಡೆದಿದ್ದರು ಎನ್ನಲಾಗಿದೆ.

ಕಾಲಕಾಲಕ್ಕೆ ಬಡ್ಡಿ ಕಟ್ಟಿಕೊಂಡು ಬಂದಿದ್ದರೂ ಹಣಕಾಸು ಬಿಕ್ಕಟ್ಟಿನಿಂದ ಸಾಲ ವಾಪಸ್ಸು ಮಾಡಲಾಗಲಿಲ್ಲ. ಅದರೆ ಹಣ ವಾಪಸ್ಸು ನೀಡುವಂತೆ ಸುನಿಲ್ ಒತ್ತಡ ಹಾಕಿದ ಬೆನ್ನಲ್ಲೆ ಗ್ರಾಮಸ್ಥರ ಸಮ್ಮುಖದಲ್ಲಿ ಜಮೀನು ಮಾರಾಟ ಮಾಡಿ ಹಣ ಕೊಡುವುದಾಗಿ ರಾಜಿ ಸಂಧಾನ ಆಗಿತ್ತು. ಹೀಗಿದ್ದರೂ ಆದಿತ್ಯವಾರ ಬೆಳಗ್ಗೆ ಶಾಂತಿಪ್ರಿಯ ಅವರ ಮನೆಗೆ ನುಗ್ಗಿದ ಸುನಿಲ್ ಕುಮಾರ್ ಕೃಷ್ಣಾರೆಡ್ಡಿ ಇಂದ್ರಮ್ಮ ಅವರು ಶಾಂತಿಪ್ರಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಮಹಿಳೆಯ ಕುಟುಂಬದವರು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.