ಡೈಲಿ ವಾರ್ತೆ : 30 ಜೂನ್ 2022

ಭಟ್ಕಳ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ. ಈ ವಿಚಾರವಾಗಿ ವಿಶ್ವದರ್ಶನ ಕನ್ನಡ ದಿನಪತ್ರಿಕೆ ಜಿಲ್ಲಾ ವರದಿಗಾರರು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಮಾತನಾಡಿ ಭಟ್ಕಳ ಪುರಸಭೆಯಲ್ಲಿ ಉರ್ದು ಭಾಷೆಯಲ್ಲಿ ನಾಮಫಲಕ ಅಳವಡಿಸಿದ್ದು ಸರಿಯಲ್ಲ, ತನಗೆ ತಿಳಿದ ಮಟ್ಟಿಗೆ ಇದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಕನ್ನಡಪರ ಸಂಘಟನೆಗಳ ಹೋರಾಟದ ಮೂಲಕ ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದು , ನಾನು ಭಟ್ಕಳ ಪುರಸಭೆಯಲ್ಲಿ ಉರ್ದು ಭಾಷೆಯ ನಾಮಫಲಕ ಅಳವಡಿಸಿದ ವಿಚಾರವಾಗಿ ಈಗಾಗಲೇ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಬಳಿ ಸಂಪೂರ್ಣ ಮಾಹಿತಿ ಕೊಡಲು ಕೇಳಿದ್ದೇನೆ. ಜಿಲ್ಲಾಧಿಕಾರಿಗಳಿಂದ ಅಧಿಕೃತ ಮಾಹಿತಿ ಬಂದ ನಂತರ ತಪ್ಪು ಮಾಡಿರುವ ಅಧಿಕಾರಿಗಳು ಮತ್ತು ವ್ಯಕಿಗಳ ಮೇಲೆ ಅತಿ ಶೀಘ್ರವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ. ಇದು ಅತಿ ಸೂಕ್ಷ್ಮ ವಿಚಾರವಾಗಿದ್ದು ಜಿಲ್ಲಾಧಿಕಾರಿಗಳಿಂದ ಮಾಹಿತಿ ಬಂದ ನಂತರ ಯಾರೇ ತಪ್ಪು ಮಾಡಿದರು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.

ಪುರಸಭಾ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಉರ್ದು ನಾಮಫಲಕ ತೆರವುಗೊಳಿಸುವಂತೆ ಸೋಮವಾರ ಮತ್ತು ಮಂಗಳವಾರ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ , ಮಂಗಳವಾರ ಸಹಾಯಕ ಆಯುಕ್ತರಿಗೆ ಮನವಿ ಕೂಡ ನೀಡಿದರು.