ಡೈಲಿ ವಾರ್ತೆ : 30 ಜೂನ್ 2022

ಕುಂಬಳೆ : ಕಾಸರಗೋಡು ಮಂಜೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯೊಳಗಿನ ಶಾಲೆಯೊಂದರ 6ನೇ ತರಗತಿಯ ವಿದ್ಯಾರ್ಥಿನಿಯನ್ನು ಐವರ ತಂಡ ಆಮ್ಮಿ ಕಾರಿನಲ್ಲಿ ಅಪಹರಿಸಲು ಯತ್ನ ನಡೆಸಿ ವಿಫಲವಾದ ಘಟನೆ ನಡೆದಿದೆ.

ಈ ಬಾಲಕಿ ಶಾಲೆ ಬಿಟ್ಟು ರಿಕ್ಷಾದಲ್ಲಿ ಮನೆಗೆ ತೆರಳಲು ರಸ್ತೆಗೆ ನಡೆದು ಬರುತ್ತಿದ್ದಾಗ ಅಲ್ಲೊಂದು ಆಮ್ಮಿಯಲ್ಲಿ ಕಾದಿದ್ದ ತಂಡ ಬಾಲಕಿಯನ್ನು ಬಲವಂತವಾಗಿ ವ್ಯಾನ್‌ನೊಳಗೆ ಎಳೆದು ಹತ್ತಿಸಿ ವೇಗದಲ್ಲಿ ಅಂಗಡಿ ಪದವು ರಸ್ತೆಯಲ್ಲಿ ಸಾಗಿತ್ತು. ಅಷ್ಟರಲ್ಲಿ ಎದುರಿನಿಂದ ಲಾರಿಯೊಂದು ಬಂದಾಗ ವ್ಯಾನ್ ನಿಧಾನವಾಗಿ ಚಲಿಸುತ್ತಿರುವಾಗ ಬಾಲಕಿ ವ್ಯಾನ್ ಬಾಗಿಲು ತೆರೆದು ಹೊರಹಾರಿ ಪಾರಾಗಿದ್ದಾಳೆ ಎಂದು ಮಾಹಿತಿ ತಿಳಿದು ಬಂದಿದೆ.

ಬಳಿಕ ಹೊಸಂಗಡಿ ಪೇಟೆಯಲ್ಲಿ ತನ್ನ ಸಂಬಂಧಿಕರೋರ್ವರಲ್ಲಿ ಹೇಳಿ ತಂದೆಗೆ ವಿಷಯವನ್ನು ಮುಟ್ಟಿಸಲಾಯಿತು. ಅವರು ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಮಂಜೇಶ್ವರ ಪೊಲೀಸರು ಅಪಹರಣ ತಂಡದ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮಂಗಲ್ಪಾಡಿಯ ಬೇಕೂರಿನಲ್ಲಿ ಇತ್ತೀಚೆಗೆ ಇದೇ ರೀತಿಯ ಅಪಹರಣ ಪ್ರಕರಣ ನಡೆದಿದೆ ಎನ್ನಲಾಗಿದೆ. ಬಾಲಕಿ ಅಪಹರಣ ತಂಡದಿಂದ ಪಾರಾಗಿದ್ದಳು.

ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.