ಡೈಲಿ ವಾರ್ತೆ:05 ಫೆಬ್ರವರಿ 2023

ದಕ್ಷಿಣ ಕನ್ನಡ: ಸಾಮಾಜಿಕ ಜಾಲತಾಣ ನಿಗಾ ಘಟಕ’ಬಲವರ್ಧನೆ : ಎಸ್‌ಪಿ ಡಾ.ವಿಕ್ರಂ ಅಮಟೆ

ಮಂಗಳೂರು: ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ನಿಗಾ ಇಡುವುದಕ್ಕಾಗಿ ದ.ಕ. ಜಿಲ್ಲೆಯ ಉಪವಿಭಾಗಗಳಲ್ಲಿರುವ “ಸಾಮಾಜಿಕ ಜಾಲತಾಣ ನಿಗಾ ಘಟಕ’ಗಳನ್ನು ಬಲಪಡಿಸ ಲಾಗುವುದು ಎಂದು ನೂತನ ಎಸ್‌ಪಿ ಡಾ. ವಿಕ್ರಮ್‌ ಅಮಟೆ ತಿಳಿಸಿದ್ದಾರೆ.

ಶನಿವಾರ ಅವರು ಪತ್ರಕರ್ತ ರೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ, ದ್ವೇಷದ ಸಂದೇಶಗಳನ್ನು ಹರಡಿಸುವುದರಿಂದ ಸಮಾಜದ ಶಾಂತಿ ಕದಡುವ ಅಪಾಯವಿದೆ. ಹಾಗಾಗಿ ಇಂತಹ ಸಂದೇಶ ಹಾಕುವವರ ಮೇಲೆ ನಿಗಾ ಇಟ್ಟು ಎಫ್ಐಆರ್‌ ದಾಖಲಿಸಿಕೊಳ್ಳಲಾಗುವುದು. ಇಂಥವರ ಮೇಲೆ ನಿರಂತರ ನಿಗಾ ಇಡಲು ಜಿಲ್ಲಾ ಕೇಂದ್ರದಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ (ಸೋಶಿಯಲ್‌ ಮೀಡಿಯಾ ಮಾನಿಟರಿಂಗ್‌ ಸೆಲ್‌) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿ ಪುತ್ತೂರು ಮತ್ತು ಬಂಟ್ವಾಳ ಉಪವಿಭಾಗಗಳ ಘಟಕ(ಸೆಲ್‌)ಗಳನ್ನು ಕೂಡ ಬಲಪಡಿಸ ಲಾಗುವುದು ಎಂದು ಡಾ. ವಿಕ್ರಮ್‌ ತಿಳಿಸಿದರು.

ಕಟ್ಟುನಿಟ್ಟಿನ ನಿಗಾ: ರೌಡಿಶೀಟರ್‌ಗಳು, ಜೈಲಿನಿಂದ ಬಿಡುಗಡೆಯಾದವರು, ಅಪರಾಧ ಹಿನ್ನೆಲೆಯಲ್ಲಿರುವವರು, ವದಂತಿಗಳನ್ನು ಹಬ್ಬಿಸುವವರು ಮೊದಲಾದ ಸಮಾಜ ಘಾತುಕರ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗುವುದು. ಸದ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಸಂಘಟಿತ ಅಪರಾಧಗಳ ತಡೆಗೂ ವಿಶೇಷ ಗಮನ ನೀಡಲಾಗುವುದು. ಸಾರ್ವಜನಿಕರು, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲಾಗುವುದು ಎಂದು ಎಸ್‌ಪಿ ಡಾ. ವಿಕ್ರಮ್‌ ತಿಳಿಸಿದರು.

ಗಡಿಭಾಗದಲ್ಲಿ ಸಿಸಿ ಕೆಮರಾ: ಕೇರಳ-ಕರ್ನಾಟಕ ಗಡಿ ಭಾಗದ ರಸ್ತೆಗಳಲ್ಲಿ ಹೆಚ್ಚಿನ ನಿಗಾ ಇಡುವುದಕ್ಕಾಗಿ ಹೆಚ್ಚುವರಿಯಾಗಿ ಸಿಸಿ ಕೆಮರಾ ಅಥವಾ ಇನ್ನಿತರ ಕ್ರಮಗಳ ಅಗತ್ಯವಿದ್ದರೆ ಜಿಲ್ಲಾಧಿಕಾರಿ ಯವರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ಅಂತಾರಾಜ್ಯ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಈಗಾಗಲೇ ಇರುವ ಸಿಸಿ ಕೆಮರಾಗಳ ಸ್ಥಿತಿಗತಿ ಪರಿಶೀಲನೆ ನಡೆಸಲಾಗುವುದು ಎಂದು ಡಾ. ವಿಕ್ರಮ್‌ ತಿಳಿಸಿದರು.

ಬೀಟ್‌ ಬಲವರ್ಧನೆ:
ಪೊಲೀಸ್‌ ಬೀಟ್‌ ವ್ಯವಸ್ಥೆ ಬಲವರ್ಧನೆ ಮಾಡಲಾಗುವುದು. ಮುಖ್ಯವಾಗಿ ಹಿರಿಯ ನಾಗರಿಕರು, ಒಂಟಿ ಮನೆಗಳಿರುವ ಪ್ರದೇಶಗಳಲ್ಲಿ ಪೊಲೀಸ್‌ ಬೀಟ್‌ ಕಟ್ಟುನಿಟ್ಟುಗೊಳಿಸಲಾಗುವುದು, ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳನ್ನು ಹನಿಟ್ರ್ಯಾಪ್‌ಗೆ ಒಳಪಡಿಸುವ, ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಆರ್‌ಬಿ ಡಿಎಸ್‌ಪಿ ಡಾ. ಗಾನ ಪಿ. ಕುಮಾರ್‌ ಉಪಸ್ಥಿತರಿದ್ದರು.