ಡೈಲಿ ವಾರ್ತೆ:07 ಫೆಬ್ರವರಿ 2023

ಉಳ್ಳಾಲದ ಕಾಂಗ್ರೆಸ್ ನ ಭದ್ರಕೋಟೆಯನ್ನು ಭೇದಿಸಲು ಉಳ್ಳಾಲ ಕ್ಷೇತ್ರದಿಂದ ಸುನಿಲ್ ಕುಮಾರ್ ಸ್ಪರ್ಧೆ.!

ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸುತ್ತಾ‌ ಬಿಜೆಪಿ? ಹಿಂದುತ್ವವನ್ನು ಎದುರಿಗಿಟ್ಟು ಗೆಲ್ಲುತ್ತೇವೆ: ಸುನಿಲ್ ಕುಮಾರ್

ದಕ್ಷಿಣಕನ್ನಡ: ಉಳ್ಳಾಲದ ಕಾಂಗ್ರೆಸ್ ನ ಭದ್ರಕೋಟೆಯನ್ನು ಭೇದಿಸಲು ಈ ಬಾರಿ ಬಿಜೆಪಿಯು ಶತಾಯಗತಾಯ ಪ್ರಯತ್ನಿಸುತ್ತಿದ್ದು ಇಲ್ಲಿ ಹಿಂದುತ್ವದ ಮುಖ ಅವಶ್ಯಕತೆ ಇದೆ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸುನಿಲ್ ಕುಮಾರ್ ತನು-ಮನ-ಧನದಿಂದ ಸಂಘಟನಾ ಚತುರನಾಗಿದ್ದು ಉಳ್ಳಾಲಕ್ಕೆ ಪರ್ಫೆಕ್ಟ್ ಕ್ಯಾಂಡಿಡೇಟ್ ಎಂದು ಹೈಕಮಾಂಡ್ ಅಭಿಪ್ರಾಯ ಪಟ್ಟಿದೆ. ಹೈಕಮಾಂಡ್ ಆದೇಶದಂತೆ ಸುನಿಲ್ ಕುಮಾರ್ ಅವರು ಉಳ್ಳಾಲಕ್ಕೆ ಭೇಟಿ ನೀಡಿದ್ದು ಹಿಂದುತ್ವದ ಮೂಲಕ ಈ ಬಾರಿ ಗೆಲ್ಲುತ್ತೇವೆ ಎಂದಿದ್ದು ಉಳ್ಳಾಲದ ಪ್ರಮುಖ ಮುಖಂಡರ ಮನೆಗೆ ಭೇಟಿ ನೀಡಿದ್ದಾರೆ. ಉಳ್ಳಾಲದ ಬಿಜೆಪಿಯ ಕಾರ್ಯಕರ್ತರಲ್ಲಿ ಈಗಾಗಲೇ ಜೋಶ್ ತುಂಬಿದ್ದು ಸುನಿಲ್ ಕುಮಾರ್ ಉಳ್ಳಾಲದ ಕಣಕ್ಕೆ ಎಂದು ಬಿರುಸಿನಿಂದ ಪ್ರಚಾರ ಪ್ರಾರಂಭವಾಗಿದೆ.

ಕಾರ್ಕಳದಲ್ಲಿ ಈ ಬಾರಿ ಹಿಂದುತ್ವದ ಬೆಂಕಿ ಚಂಡು ಪ್ರಮೋದ್ ಮುತಾಲಿಕ್ ಚುನಾವಣೆ ನಿಲ್ಲುವುದಾಗಿ ಘೋಷಿಸಿದ್ದು ಬಿಜೆಪಿಯ ಮತ್ತು ಹಿಂದು ಸಂಘಟನೆಯ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಮುತಾಲಿಕ್ ಬೆಂಬಲಕ್ಕೆ ನಿಂತಿದ್ದಾರೆ. ಇದು ನೇರವಾಗಿ ಸುನಿಲ್ ಕುಮಾರನ ವೋಟಿಗೆ ಹೊಡೆತ ಬೀಳಲಿದ್ದು ಸುನಿಲ್ ಕುಮಾರ್ ನರ್ವಸ್ ಆಗಿದ್ದಾರೆ ಎನ್ನುವುದು ಕಾರ್ಕಳ ಜನತೆಯ ಮಾತುಗಳು. ಮುತಾಲಿಕ್ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಿದರೆ, ರಾಜ್ಯದ ಎಲ್ಲಾ ಮೂಲೆಗಳಲ್ಲೂ ಶ್ರೀ ರಾಮ ಸೇನೆ ಅಭ್ಯರ್ಥಿ ಸ್ಪರ್ಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಉಡುಪಿ, ಮಂಗಳೂರು ಹಿಂದುತ್ವದ ಭದ್ರಕೋಟೆಯಾದರೂ ಸಹ ಕರ್ನಾಟಕದ ಕೆಲವೊಂದು ಭಾಗದಲ್ಲಿ ಶ್ರೀರಾಮ ಸೇನೆಯು ಆಳವಾಗಿ ಬೇರೂರಿದೆ, ಮಠಾಧೀಶರ ಬೆಂಬಲವಿದ್ದು ಅಸಂಖ್ಯಾತ ಕಾರ್ಯಕರ್ತರಿದ್ದಾರೆ. ಹೀಗಿರುವಾಗ
ಕಾರ್ಕಳದಂತ ಚಿಕ್ಕ ಕ್ಷೇತ್ರಕ್ಕೋಸ್ಕರ ಶ್ರೀರಾಮ ಸೇನೆಯನ್ನು ಎದುರು ಹಾಕಿಕೊಳ್ಳುವ ರಿಸ್ಕ್ ಗೆ ಹೈಕಮಾಂಡ್ ತಯಾರಿಲ್ಲ.

ಮಂಡ್ಯದ ಅಭ್ಯರ್ಥಿಯಾಗಿರುವ ಸುಮಲತಾ ಎದುರು ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸದೆ, ಬಾಹ್ಯ ಬೆಂಬಲವನ್ನು ತೋರಿಸಿರುವ ಮಾದರಿಯನ್ನು ಕಾರ್ಕಳದಲ್ಲಿ ಅನುಸರಿಸುವುದು ಬಹುತೇಕ ಖಚಿತ. ಇದಕ್ಕೆ ಸಾಕ್ಷಿ ಎಂಬಂತೆ ಸುನಿಲ್ ಕುಮಾರ್ ನವರು ಮುತಾಲಿಕರ ಕಾರ್ಕಳದ ಚುನಾವಣಾ ಸ್ಪರ್ಧೆಯನ್ನು ಇಂದು ಸ್ವಾಗತಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉಳ್ಳಾಲವನ್ನು ಬಿಜೆಪಿ ಟಾರ್ಗೆಟ್ ಮಾಡಿದ್ದು, ಕಾಂಗ್ರೆಸ್ ನ ಯು.ಟಿ‌ ಖಾದರ್ ಗೆ ಹೊಡೆತ ನೀಡಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ. ಹಾಗಾಗಿ ಕ್ಷೇತ್ರದಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಸಾಧ್ಯತೆ ಸಾಕಷ್ಟಿದೆ.