ಡೈಲಿ ವಾರ್ತೆ:17 ಫೆಬ್ರವರಿ 2023

ಮಂಗಳೂರು: ಜೈಲಿಗೆ ಮಾದಕ ವಸ್ತು ಸಾಗಾಟ ಯತ್ನ: ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ನಿಷೇಧಿತ ಮಾದಕ ವಸ್ತು ಕೊಂಡೊಯ್ಯುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದೀಕ್ಷಿತ್‌ ಕಾಪಿಕಾಡು ಮತ್ತು ಅಭಿಷೇಕ್‌ ಬಂಧಿತ ಆರೋಪಿಗಳು. ಇವರು ಗುರುವಾರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ನೀಡಲೆಂದು ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ ಮತ್ತು ಗಾಂಜಾ ವೀಡ್‌ ಆಯಿಲ್‌ ಅನ್ನು ಕೊಂಡೊಯ್ಯುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿಗಳಿಂದ 15,000 ರೂ. ಮೌಲ್ಯದ 3 ಗ್ರಾಂ ಎಂಡಿಎಂಎ ಹಾಗೂ ಸುಮಾರು 5,000 ರೂ. ಮೌಲ್ಯದ 1.30 ಗ್ರಾಂ ಗಾಂಜಾ ವೀಡ್‌ ಆಯಿಲ್‌, ಮೊಬೈಲ್‌ ಫೋನ್‌ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬೇಕರಿ ತಿನಿಸುಗಳೊಂದಿಗೆ ಉಪ್ಪಿನಕಾಯಿ ಪ್ಯಾಕೆಟ್‌ನಲ್ಲಿ ಮಾದಕ ವಸ್ತುವನ್ನಿಟ್ಟು ಕೊಂಡೊಯ್ಯಲು ಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.