ಡೈಲಿ ವಾರ್ತೆ:22 ಫೆಬ್ರವರಿ 2023

ನಾನಂತೂ ಮತ್ತೆ ಒಳಗೆ ಬರುವುದಿಲ್ಲ : ಸದನದಲ್ಲಿ ವಿದಾಯ ಭಾಷಣ ಮಾಡಿ ಭಾವುಕರಾದ ಯಡಿಯೂರಪ್ಪ!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ಬುಧವಾರ ವಿದಾಯ ಭಾಷಣ ಮಾಡಿ ಭಾವುಕರಾದರು.

ವಿಧಾನಸಭೆಯಲ್ಲಿ ಮಾತನಾಡಿದ 79ರ ಹರೆಯದ ಹಿರಿಯ ನಾಯಕ ಯಡಿಯೂರಪ್ಪ ಅವರು, ಇದೊಂದು ಅಪರೂಪದ ಕ್ಷಣ, ನಾನು ಈಗಾಗಲೇ ಹೇಳಿದಂತೆ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದು ನನ್ನ ವಿದಾಯ ಭಾಷಣ. ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ನೀಡಿದ ಸ್ಥಾನಮಾನ ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದರು.
ಕೆಲ ವಿಪಕ್ಷ ಸದಸ್ಯರು ನೀವು ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾರೂ ಕಿತ್ತುಹಾಕಿಲ್ಲ. ಅವರೇ ತಮ್ಮ ವಯಸ್ಸಿನ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಈಗಲೂ ಅವರೇ ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆಯನ್ನೂ ಎದುರಿಸುತ್ತೇವೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮಂಗಳವಾರ ವಿಧಾನ ಷರಿಷತ್ತಿನಲ್ಲಿರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ
ಮುಖ್ಯಮಂತ್ರಿ ಪರವಾಗಿ ಉತ್ತರಿಸಿದ್ದರು.

ಒತ್ತಡದಿಂದ ಅವರು ಪದತ್ಯಾಗ ಮಾಡಿದರು’ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಆದರೆ, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜೀನಾಮೆ ಪ್ರಕಟಿಸುವ ವೇಳೆ ತಮ್ಮ ಭಾಷಣದಲ್ಲಿ ಭಾವುಕರಾಗಿದ್ದು ಹೊರತುಪಡಿಸಿದರೆ,ಎಲ್ಲಿಯೂ ಅವರು ತಾವು ಒತ್ತಡದಿಂದ ರಾಜೀನಾಮೆ ನೀಡಿರುವುದಾಗಿ ಹೇಳಿಲ್ಲ’ ಎಂದು ತಿಳಿಸಿದ್ದರು.