ಡೈಲಿ ವಾರ್ತೆ:03 ಮಾರ್ಚ್ 2023

ಡಿಜೆ ಶಬ್ದಕ್ಕೆ ಮದುಮಗ ಕಲ್ಯಾಣಮಂಟಪದಲ್ಲೇ ಕುಸಿದು ಮೃತ್ಯು

ಬಿಹಾರ್ : ಮದುಮಗನೊಬ್ಬ ಕಲ್ಯಾಣಮಂಟಪದಲ್ಲೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.

ಸುರೇಂದ್ರ ಕುಮಾರ್ ಕುಸಿದು ಬಿದ್ದು ಸಾವಿಗೀಡಾದ ವರ ಬುಧವಾರ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸುರೇಂದ್ರ ಕುಮಾರ್‌ ಹಾಗೂ ಮದುಮಗಳು ವೇದಿಕೆ ಮೇಲೆ ನಿಂತಿದ್ದರು. ಆಗಷ್ಟೇ ಇಬ್ಬರೂ ಹಾರ ಬದಲಾಯಿಸಿಕೊಂಡಿದ್ದರು. ಇದೇ ವೇಳೆ ಡಿಜೆ ಶಬ್ದ ಜೋರಾಗಿ ಕೇಳಿಸುತ್ತಿತ್ತು. ಹಲವು ಬಾರಿ ಸೌಂಡ್‌ ಕಡಿಮೆ ಮಾಡುವಂತೆ ಸುರೇಂದ್ರ ಕುಮಾರ್‌ ಹೇಳಿದ್ದರು. ಆದರೂ, ಡಿಜೆ ಶಬ್ದ ಕಡಿಮೆ ಮಾಡಿರಲಿಲ್ಲ. ಇದರಿಂದ ಸುರೇಂದ್ರ ಕುಮಾರ್‌ ವೇದಿಕೆ ಮೇಲೆಯೇ ಕುಸಿದಿದ್ದಾರೆ.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಹಾಗೆಯೇ, ಡಿಜೆ ಅತಿಯಾದ ಶಬ್ದದಿಂದ ಹೃದಯಾಘಾತವುಂಟಾಗಿ ಸುರೇಂದ್ರ ಕುಮಾರ್‌ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.