ಡೈಲಿ ವಾರ್ತೆ:10 ಮಾರ್ಚ್ 2023

ಬಂಟ್ವಾಳ ವಿಧಾನಸಭಾ ಕ್ಷೇತ್ರದ 14 ದಿನಗಳ “ಪ್ರಜಾಧ್ವನಿ ಯಾತ್ರೆಗೆ” ಪುಂಚಮೆಯಲ್ಲಿ ಚಾಲನೆ.

ಬಂಟ್ವಾಳ : ರಮಾನಾಥ ರೈ ಅನಿರೀಕ್ಷಿತ ಸೋಲನುಭವಿಸಿದ ಬಳಿಕ ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ದಿ ಶೂನ್ಯವಾಗಿದೆ. ಕೇವಲ ಬ್ಯಾನರ್-ಕಟೌಟ್ ರಾಜಕಾರಣ ರಾರಾಜಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.

ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ “ಬಂಟ್ವಾಳ ಪ್ರಜಾಧ್ವನಿ ಯಾತ್ರೆ” ಗೆ ಶುಕ್ರವಾರ ಬೆಳಿಗ್ಗೆ ಪೊಳಲಿ ಸಮೀಪದ ಪುಂಚಮೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲೇ ಮಾದರಿಯಾಗುವ ರೀತಿಯಲ್ಲಿ ಐದು ಸಾವಿರ ಕೋಟಿ ರೂಪಾಯಿ ಅನುದಾನದ ಮೂಲಕ ಸಾಮಾನ್ಯ ಜನರಿಗೂ ಅನುಕೂಲವಾಗುವ ರೀತಿಯ ಅಭಿವೃದ್ದಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕವೂ ಕ್ಷೇತ್ರದ ಜನರ ಮಧ್ಯೆ ನಿರಂತರ ಸಂಪರ್ಕ ಸಾಧಿಸುವ ಮೂಲಕ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ. ಈ ಬಾರಿ ಮತ್ತೆ ರಮಾನಾಥ ರೈ ಬಂಟ್ವಾಳದಲ್ಲಿ ಗೆದ್ದು ಬಂದು ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಲ್ಲಿ ಅಧಿಕಾರಕ್ಕೆ ಬರಲಿದ್ದು, ಪಕ್ಷ ನೀಡಿರುವ ಗ್ಯಾರಂಟಿ ಸವಲತ್ತುಗಳು ತಕ್ಷಣ ಜಾರಿಗೆ ಬರಲಿದೆ ಎಂದ ಹರೀಶ್ ಕುಮಾರ್ ಭ್ರಷ್ಟಾಚಾರದ, ಕಮಿಷನ್ ಆಧಾರದ ಸರಕಾರವನ್ನು ಜನ ಕಿತ್ತೊಗೆಯುವ ದಿನ ದೂರವಿಲ್ಲ. ಕಾಂಗ್ರೆಸ್ ಹಾಗೂ ರಮಾನಾಥ ರೈ ಕೈಗೆ ಅಧಿಕಾರ ಬಂದು ಜನರ ಕಷ್ಟಗಳಿಗೆ ಸ್ಪಂದಿಸಲಿದ್ದಾರೆ ಎಂದು ಭರವಸೆ ನೀಡಿದರು.



ಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನನ್ನ ಶಾಸಕ ಅವಧಿ ಕಳೆದ ಬಳಿಕ ಬಂಟ್ವಾಳ ಕ್ಷೇತ್ರದಲ್ಲಿ ಬಡವರಿಗೆ ಒಂದೇ ಒಂದು ಮನೆ ಒದಗಿಸಿದ್ದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ಅತೀ ಹೆಚ್ಚು 94ಸಿ ಹಕ್ಕು ಪತ್ರ, ವಸತಿ ಯೋಜನೆಯಡಿ ಅತೀ ಹೆಚ್ಚು ಮನೆ ಒದಗಿಸಲಾಗಿದೆ. ಅತೀ ಹೆಚ್ಚು ಅಂಗನವಾಡಿಗಳನ್ನು ನಿರ್ಮಿಸಲಾಗಿದೆ. ನನ್ನ ಅವಧಿಯ ಬಳಿಕ ಜನಪರ ಯೋಜನೆ ಒಂದೂ ಕಾರ್ಯಗತಗೊಂಡಿಲ್ಲ ಎಂದರು.



ಬಂಟ್ವಾಳ ವೆಂಕಟರಮಣ ದೇವಸ್ಥಾನ, ಅಗ್ರಹಾರ ಚರ್ಚ್, ಬಂಟ್ವಾಳ ಕೆಳಗಿನಪೇಟೆ ಜುಮಾ ಮಸೀದಿ ಹಾಗೂ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಮಾನಾಥ ರೈ ನೇತೃತ್ವದ ನಿಯೋಗ ಪುಂಚಮೆಯಿಂದ ಪ್ರಜಾದ್ವನಿ ಯಾತ್ರೆಗೆ ಚಾಲನೆ ನೀಡಲಾಯಿತು.

ಯಾತ್ರಾ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್,
ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ವಾಸು ಪೂಜಾರಿ, ಮುಹಮ್ಮದ್ ನಂದರಬೆಟ್ಟು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪ್ರಮುಖರಾದ ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು, ಇಬ್ರಾಹಿಂ ನವಾಝ್ ಬಡಕಬೈಲು, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಾಶಿವ ಬಂಗೇರ, ಕೆ ಪದ್ಮನಾಭ ರೈ, ಸುರೇಶ್ ಜೋರ, ಅರ್ಶದ್ ಸರವು, ಚಂದ್ರಶೇಖರ ಪೂಜಾರಿ, ಚಂದ್ರಶೇಖರ ಭಂಡಾರಿ, ಜಯಂತಿ ವಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಲವೀನಾ ವಿಲ್ಮಾ ಮೊರಾಸ್, ಮಲ್ಲಿಕಾ ಪಕ್ಕಳ, ಜಾಸ್ಮಿನ್ ಡಿ ಸೋಜ, ಪ್ಲೋಸಿ ಡಿ ಸೋಜ, ವೀನಾ ಆಚಾರ್ಯ, ಸಿದ್ದೀಕ್ ಸರವು, ಸಿರಾಜ್ ಮದಕ, ಜಿ.ಇಬ್ರಾಹಿಂ ಮಂಚಿ, ಸಂದೇಶ್ ಶೆಟ್ಟಿ ಬಿಕ್ನಾಜೆ, ಮಧುಸೂಧನ ಶೆಣೈ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ತಿಲಕ್ ಮಂಚಿ, ಸಂಜಿತ್ ಪೂಜಾರಿ, ವೆಂಕಪ್ಪ ಪೂಜಾರಿ, ದೀಕ್ಷಿತ್, ಉಮ್ಮರ್ ಕುಂಞಿ ಸಾಲೆತ್ತೂರು, ಉಪಸ್ಥಿತರಿದ್ದರು.

ಕರಿಯಂಗಳ ಗ್ರಾ ಪಂ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪಲ್ಲಿಪಾಡಿ ಸ್ವಾಗತಿಸಿ, ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.