ಡೈಲಿವಾರ್ತೆ:18/ಆಗಸ್ಟ್ /2026

ಚಾಮರಾಜನಗರ: ಮೂವರ ಎನ್‌ಕೌಂಟರ್ ಪ್ರಕರಣ – ಅರಣ್ಯಾಧಿಕಾರಿಗಳಿಂದ ವಸ್ತು ಜಪ್ತಿ, ಅನುಮಾನಕ್ಕೆ ಎಡೆಮಾಡಿಕೊಟ್ಟ ಹೊಸ ಚಪ್ಪಲಿ!

ಚಾಮರಾಜನಗರ: ಅರಣ್ಯಾಧಿಕಾರಿಗಳಿಂದ ಕಾವೇರಿ ವನ್ಯಧಾಮದಲ್ಲಿ ಮೂವರ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿ ವಸ್ತುಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ. ಘಟನಾ ಸ್ಥಳದಲ್ಲಿ ಹಲವು ವಸ್ತುಗಳು ಸೇರಿ ಹೊಸ ಚಪ್ಪಲಿ ಕೂಡ ಸಿಕ್ಕಿದ್ದು, ಇದರಿಂದ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಇದಕ್ಕೆ ಅರಣ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ನಾಂದಿ ಹಾಡಿದೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಅರಣ್ಯ ಇಲಾಖೆ ಮಾಡಿದ್ದು ತಪ್ಪು ಎಂದರೆ, ಅರಣ್ಯಾಧಿಕಾರಿಗಳು ಆತ್ಮರಕ್ಷಣೆಗಾಗಿ ಶೂಟೌಟ್ ಮಾಡಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು ಜಪ್ತಿ ಮಾಡಿದ ಹಲವು ವಸ್ತುಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳದಲ್ಲಿ ಸಿಕ್ಕ 2 ಚೀಲಗಳಲ್ಲಿ ಮಾಂಸ, ಬಂದೂಕು, ಚಪ್ಪಲಿಗಳು ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಾಡಿಗೆ ಹೋದವರು ಹೊಸ ಚಪ್ಪಲಿ ತಗೊಂಡು ಹೋಗಿದ್ರಾ? ಸ್ಟಿಕ್ಕರ್ ಕೂಡ ಕಳಚದ, ಕಾಲಿಗೆ ಧರಿಸದ ಹೊಸ ಚಪ್ಪಲಿ ಸಿಕ್ಕಿದೆ. ಸ್ವಲ್ಪವೂ ಕೊಳೆಯಾಗದ ಚಪ್ಪಲಿಗಳು ಹಾಕಿಕೊಂಡು ಹೋಗಿದ್ರಾ ಎಂಬ ಅನುಮಾನ ಶುರುವಾಗಿದೆ. ಅಥವಾ ಅರಣ್ಯಾಧಿಕಾರಿಗಳ ಒಂದು ತಪ್ಪು ಮುಚ್ಚಲು ಹೋಗಿ ಮತ್ತೊಂದು ತಪ್ಪು ಎಸಗಿದ್ರಾ? ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ.

ಅರಣ್ಯಾಧಿಕಾರಿಯಿಂದ ಸ್ಪಷ್ಟನೆ:

ನಮ್ಮ ಸಿಬ್ಬಂದಿ ಅಲ್ಲಿಗೆ ಹೊಸ ಚಪ್ಪಲಿ ತಗೊಂಡು ಹೋಗಿ ಇಟ್ಟಿಲ್ಲ. ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಜೊತೆ ಚಪ್ಪಲಿ ಸಿಕ್ಕಿದೆ. ಕಿತ್ತೋದ್ರೆ ಇರಲಿ ಅಂತಾ ತಂದು ಇಟ್ಟುಕೊಂಡಿರಬಹುದು. ಬ್ಯಾಗ್‌ನಲ್ಲಿ ದಿನಸಿ ಪದಾರ್ಥ, ಟಾರ್ಚ್ ಸೇರಿದಂತೆ ಬೇಟೆಯಾಡಲು ಬೇಕಾದ ಸಲಕರಣೆಗಳಿದ್ದವು ಎಂದು ಅರಣ್ಯಾಧಿಕಾರಿ ಮರಿಸ್ವಾಮಿ ಹೇಳಿದ್ದಾರೆ. ಅರಣ್ಯಕ್ಕೆ ಬಂದಿದ್ದವರು ಬೇಟೆಗಾರರು. ದನ ಮೇಯಿಸಲು ಅಥವಾ ಹುಡುಕಲು ಅರಣ್ಯಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಬೇಟೆಯಾಡುವ ಉದ್ದೇಶದಿಂದಲೇ ಬಂದಿದ್ದರು ಎಂದು ಹೇಳಿದ್ದಾರೆ. 8 ರಿಂದ 10 ಕಿ.ಮೀ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಅವರು ಸತ್ತ 75 ಮೀಟರ್ ದೂರದಲ್ಲಿ 2 ಬ್ಯಾಗ್‌ಗಳಲ್ಲಿ ಮಾಂಸ ಸಿಕ್ಕಿದೆ. ಮೂವರನ್ನು ಶೂಟ್ ಮಾಡಿದ್ದು ಒಬ್ಬನೇ ಅರಣ್ಯ ಸಿಬ್ಬಂದಿ. ಉಳಿದವರು ಆತನ ಜೊತೆಗಿದ್ದರು ಎಂದು ಮೂವರ ಎನ್‌ಕೌಂಟರ್ ಪ್ರಕರಣ ಸಂಬಂಧ ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಅರಣ್ಯ ಸಿಬ್ಬಂದಿ ನಾಪತ್ತೆ ವಿಚಾರವಾಗಿಯೂ ಎಸಿಎಫ್ ಮರಿಸ್ವಾಮಿ ಮಾತನಾಡಿ ಯಾವುದೇ ದುರ್ಘಟನೆ ನಡೆಯಬಾರದೆಂದು ಅವರನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟಿದ್ದೇವೆ. ಹೆದರಿ ಓಡುವ ಪರಿಸ್ಥಿತಿ ಇಲ್ಲ. ತನಿಖಾ ತಂಡದ ಮುಂದೆ ಹಾಜರುಪಡಿಸಿ ಹೇಳಿಕೆ ಕೊಟ್ಟಿದ್ದಾರೆ ಎಂದರು.

ಒಟ್ಟಿನಲ್ಲಿ ಈ ಪ್ರಕರಣದ ತನಿಖೆ ಕೂಡ ಚುರುಕಾಗಿದೆ. ಪ್ರಾಥಮಿಕವಾಗಿ ಇಂದು ಅಥವಾ ನಾಳೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಶೂಟೌಟ್ ಮಾಡಿದ್ದ ಅರಣ್ಯ ಸಿಬ್ಬಂದಿ ಕೂಡ ಅರಣ್ಯಾಧಿಕಾರಿಗಳ ಕಣ್ಗಾವಲಿನಲ್ಲಿದ್ದು, ತನಿಖಾಧಿಕಾರಿ ಮುಂದೆ ಕೂಡ ಹಾಜರುಪಡಿಸಿ ಅಂದಿನ ಘಟನಾವಳಿಗಳ ಬಗ್ಗೆ ವಿವರಣೆ ಕೂಡ ಕೊಟ್ಟಿದ್ದಾರೆ. ತನಿಖೆ ವರದಿಯಲ್ಲಿ ಯಾರದ್ದು ತಪ್ಪು ಅನ್ನೋದು ತಿಳಿಯಲಿದೆ.