ಡೈಲಿ ವಾರ್ತೆ:25 ಮಾರ್ಚ್ 2023

ಮಾರ್ಚ್ 28 ರಂದು ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಹೋರಾಟ ಸಮಿತಿಯಿಂದ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ತಡೆ!

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಹೋರಾಟ ಸಮಿತಿ ಬ್ರಹ್ಮಾವರ ಇವರ ವತಿಯಿಂದ ಭದ್ರಗಿರಿಯಿಂದ ಮಾಬುಕಳ ತನಕ ಸರ್ವಿಸ್ ರಸ್ತೆ ಮಾಡುವಂತೆ ಮತ್ತು ಉಪ್ಪಿನಕೋಟೆ ಮತ್ತು ದೂಪದ ಕಟ್ಟೆಯ ಮಧ್ಯದಲ್ಲಿ ರಸ್ತೆ ಓಪನ್ ಇಡುವಂತೆ ಒತ್ತಾಯಿಸಿ ಮಾರ್ಚ್ 28 ಮಂಗಳವಾರ ಬೆಳಿಗ್ಗೆ ಉಪ್ಪಿನಕೋಟೆ ಹೋಟೇಲ್ ಫಾರ್ಚೂನ್ ಬಳಿ ಪ್ರತಿಭಟನಾ ಸಭೆ ಬಳಿಕ ರಾಷ್ಟ್ರೀಯ ಹೆದ್ದಾರಿ 66 ತಡೆದು, ಬ್ರಹ್ಮಾವರ ತಹಶೀಲ್ದಾರ ಕಛೇರಿ ತನಕ ಕಾಲ್ನಡಿಗೆ ವಾಹನ ಜಾಥಾ ಮತ್ತು ಧರಣಿ ಮಾಡುವ ಕುರಿತು ಹೋರಾಟ ಸಮಿತಿಯ ಸಂಚಾಲಕ ಗೋವಿಂದ ರಾಜ್ ಹೆಗ್ಡೆ ಶನಿವಾರ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.



ಇಲ್ಲಿನ ಸರ್ವಿಸ್ ರಸ್ತೆ ಇಲ್ಲದೆ ವಿರುದ್ಧ ದಿಕ್ಕಿನಿಂದ ಸಂಚರಿಸುವಾಗ ಆಗುವ ಅಪಘಾತಗಳು ಸಾವು ನೋವುಗಳ ಅಂಕಿ ಅಂಶವನ್ನು ತಿಳಿಸಿದರು. ಜನಸಾಂದ್ರತೆ ಹೆಚ್ಚು ಇರುವಲ್ಲಿ ಮತ್ತು ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ ಶಾಲಾ ಕಾಲೇಜು, ಪ್ರಾರ್ಥನಾ ಮಂದಿರ ಮುಂತಾದವುಗಳು ಮಾಡಬೇಕಾದಂತೆ ಮಾಡದೇ ಇಲ್ಲಿನ ರಸ್ತೆ ಅವೈಜ್ಞಾನಿಕವಾಗಿದ್ದು, ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸುವಂತೆ ಅವರು ಒತ್ತಾಯಿಸಲು ಅಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಭುಜಂಗ ಶೆಟ್ಟಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ,ಫಾಧರ್ ಡೇವಿಡ್ ಕ್ರಾಸ್ತಾ,ಅಟೋ ಮತ್ತು ಟ್ಯಾಕ್ಸಿ ಸಂಘಟನೆಯ ರಮೇಶ್ ನಾಯಕ್, ಸಾಧು ಪೂಜಾರಿ ರಾಜು ಸಾಲ್ಯಾನ್, ಹರೀಶ್ ಗೋಷ್ಠಿಯಲ್ಲಿದ್ದರು.