ಡೈಲಿ ವಾರ್ತೆ:17 ಏಪ್ರಿಲ್ 2023

ನನ್ನ ಗಂಡ ಏನು ಅನ್ಯಾಯ ಮಾಡಿದ್ದರು: ಕಣ್ಣೀರಿಟ್ಟ ಜಗದೀಶ ಶೆಟ್ಟರ ಪತ್ನಿ ಶಿಲ್ಪಾ ಶೆಟ್ಟರ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ನಿವಾಸಕ್ಕೆ ಬಂದ ಜಗದೀಶ್ ಶೆಟ್ಟರ ಅವರನ್ನು ಪತ್ನಿ ಶಿಲ್ಪಾ ಶೆಟ್ಟರ ತಬ್ಬಿಕೊಂಡು ಕಣ್ಣೀರಿಟ್ಟರು. ಸ್ವತಃ ಶೆಟ್ಟರ ಸಂತೈಸಲು ಯತ್ನಿಸಿದರಲ್ಲದೆ, ಅವರು ಸಹ ಭಾವುಕರಾದರು.

ನಂತರವೂ ಶಿಲ್ಪಾ ಶೆಟ್ಟರ ಬಿಜೆಪಿ ನನ್ನ ಗಂಡ ಏನು ಅನ್ಯಾಯ ಮಾಡಿದ್ದರು, ಅವರಿಗೆ ಟಿಕೆಟ್ ತಪ್ಪಿಸಲಾಗಿತ್ತಲ್ಲ ಎಂದು ಅಬ್ಬರಿಸಿ ಅತ್ತರು. ಪಕ್ಕದಲ್ಲಿದ್ದ ಮಹಿಳೆಯರು ಸಂತೈಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಿಲ್ಪಾ ಶೆಟ್ಟರ, ಬಯಲು ಜಾಗದಂತಿದ್ದ ಬಿಜೆಪಿಯನ್ನು ಒಂದೊಂದು ಇಟ್ಟಿಗೆ ಇರಿಸಿ ಮನೆ ಕಟ್ಟುವ ಕೆಲಸ ಮಾಡಿದ್ದಾರೆ ಆದರೂ ನನ್ನ ಗಂಡನಿಗೆ ಅನ್ಯಾಯ ಮಾಡಿದ್ದಾರೆ. ಪಕ್ಷದ ಹಿರಿಯ ನಾಯಕನಾದ ನನ್ನ ಗಂಡನಿಗೆ ಟಿಕೆಟ್ ಯಾಕೆ ನೀಡಲಿಲ್ಲ, ನನಗೆ, ನನ್ನ ಸೊಸೆಗೆ ಟಿಕೆಟ್ ನೀಡುತ್ತವೆ ಎಂದರು. ನನ್ನ ಗಂಡ ಏನು ತಪ್ಪುಮಾಡಿದ್ದಾರೆ ಎಂದರು. ಇದು ನನ್ನ ಕೊನೆ ಚುನಾವಣೆ ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡುವೆ, ಆರು ತಿಂಗಳಲ್ಲಿ ರಾಜೀನಾಮೆ ನೀಡುವೆ ನಂತರ ನೀವು ರಾಜ್ಯಸಭೆ ಸದಸ್ಯನನ್ನಾಗಿ ಮಾಡಿದರೆ ಒಪ್ಪಿಕೊಂಡು ಪಕ್ಷ ಸೂಚಿಸುವ ಕೆಲಸ ಮಾಡುವೆ ಎಂದು ಮನವಿ ಮಾಡಿದರು ಕೇಳಲಿಲ್ಲ. ನನ್ನ ಗಂಡನಿಗೆ ಅನ್ಯಾಯ ಮಾಡಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

ಕ್ಷೇತ್ರದ ಜನರ ಆಶೀರ್ವಾದದಿಂದ ನನ್ನ ಗಂಡ ಗೆದ್ದು ಬಂದೇ ಬರುತ್ತಾರೆ ಎಂದರು.