ಡೈಲಿ ವಾರ್ತೆ:18 ಏಪ್ರಿಲ್ 2023

ಒಂದು ಪಕ್ಷದ ಪರವಾಗಿ ಪ್ರಚಾರ ಕಾರ್ಯ ಸರಕಾರಿ ಕರ್ತವ್ಯ ಲೋಪ: ಹರೇಕಳ ಗ್ರಾ. ಪಂ ಪಿಡಿಒ ಯಶವಂತ ಬೆಳ್ಚಡ ಅಮಾನತು!

ಮಂಗಳೂರು: ಹರೇಕಳ ಗ್ರಾಮ ಪಂಚಾಯತ್‌ನ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಯಶವಂತ ಬೆಳ್ಚಡ ಅವರನ್ನು ಅಮಾನತುಗೊಳಿಸಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ನೀಡಿರುವ ದೂರಿನ ಮೇರೆಗೆ ದ.ಕ. ಜಿಪಂ ಸಿಇಒ ಡಾ.ಕುಮಾರ ನೀಡಿದ ತನಿಖಾ ವರದಿಯನ್ನು ಆಧರಿಸಿ ಯಶವಂತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.

ಹರೇಕಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಯಶವಂತ ಬೆಳ್ಚಡ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದು, ಸರಕಾರಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ದಾಖಲೆ ಸಮೇತ ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದರು.

ಅದರಂತೆ ಜಿಪಂ ಸಿಇಒ ಡಾ.ಕುಮಾರ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಪಿಡಿಒ ಯಶವಂತ ಬೆಳ್ಚಡ ತನ್ನ ವಿರುದ್ಧ ಕೇಳಿ ಬಂದ ಆರೋಪವನ್ನು ಅಲ್ಲಗಳೆದಿದ್ದರೂ ಆಡಿಯೋ ಸಂಭಾಷಣೆಯ ಸೀಡಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ ಎಂದು ದ.ಕ. ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಅದರಂತೆ ಅಮಾನತುಗೊಳಿಸಿ ಆದೇಶಿಸಲಾಗಿದೆ.