ಡೈಲಿ ವಾರ್ತೆ:20 ಏಪ್ರಿಲ್ 2023

ಬಂಟ್ವಾಳದಲ್ಲಿ ರಮಾನಾಥ ರೈ ನಾಮಪತ್ರ ಸಲ್ಲಿಕೆಗೆ ಜನಸಾಗರ. ಕಾರ್ಯಕರ್ತರ ಹರ್ಷೋದ್ಘಾರದ ನಡುವೆ ಅದ್ದೂರಿ ಪಾದಯಾತ್ರೆ

ಬಂಟ್ವಾಳ : ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಗುರುವಾರ ಭಾರೀ ಜನಸಾಗರದ ನಡುವೆ ಅದ್ದೂರಿ ಪಾದಯಾತ್ರೆ ನಡೆಸಿ ನಾಮಪತ್ರ ಸಲ್ಲಿಸಿದರು.

ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಹೊರಟ ಸಾವಿರಾರು ಜನರ ಉತ್ಸಾಹಭರಿತ ಪಾದಯಾತ್ರೆ ಬಿ.ಸಿ.ರೋಡ್ ಬಸ್ ನಿಲ್ದಾಣದ ವರೆಗೆ ಸಾಗಿತು. ನಂತರ ಬಂಟ್ವಾಳ ಆಡಳಿತ ಸೌಧದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಪಕ್ಷದ ಪ್ರಮುಖರೊಂದಿಗೆ ತೆರಳಿದ ರೈ ಗಳು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವುದಕ್ಕೂ ಮುನ್ನಾ ಬಿ.ಸಿ.ರೋಡ್ ಕೇಂದ್ರ ಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಮಾನಾಥ ರೈ, ನನ್ನ ಸುಧೀರ್ಘ ಜನಸೇವೆಯ ಜೀವನದಲ್ಲಿ ಒಂಬತ್ತನೇ ಬಾರಿ ಒಂದೇ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಂತಹದೇ ಪ್ರತೀಕೂಲ ವಾತಾವರಣದಲ್ಲಿ ನನ್ನ ಜೊತೆ ನಿಂತ ನಿಮ್ಮ ಋಣವನ್ನು ಜನ್ಮ ಜನ್ಮಾಂತರಕ್ಕೂ ತೀರಿಸಲು ಸಾಧ್ಯವಿಲ್ಲ ಎಂದ ಅವರು
ಇಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನನ್ನೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿ, ನನ್ನನ್ನು ಆಶೀರ್ವದಿಸಿದ ತಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಧಿಕಾರದಲ್ಲಿದ್ದಾಗ ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ, ತಮಗೆಲ್ಲಾ ಅಗೌರವವನ್ನುಂಟು ಮಾಡುವ ಯಾವುದೇ ಕೃತ್ಯವನ್ನು ಮಾಡಿಲ್ಲ ಎಂದರು.

ಕಳೆದ ಚುನಾವಣೆಯಲ್ಲಿ ನನ್ನನ್ನು ಅಪಪ್ರಚಾರದಿಂದ ಸೋಲಿಸಲಾಯಿತು. ಈ ಚುನಾವಣೆಯಲ್ಲಿ ತಮ್ಮೆಲ್ಲರ ಸಹಕಾರದಿಂದ ಬಂಟ್ವಾಳದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸೋಣ ಎಂದು ಅವರು ಕರೆ ನೀಡಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕೇರಳದ ನ್ಯಾಯವಾದಿ ಗೋವಿಂದನ್, ನ್ಯಾಯವಾದಿ ಅಶ್ವನಿ ಕುಮಾರ್ ರೈ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುವಾಗ ರಮಾನಾಥ ರೈ ಅವರ ಜೊತೆಗೆ ಕೆ.ಪಿ.ಸಿ.ಸಿ. ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಬಿ.ಎಚ್. ಖಾದರ್ ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸದಸ್ಯ ಐವನ್ ಡಿಸೋಜಾ, ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ, ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ, ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಪ್ರಮುಖರಾದ ರೋಜಿ ಜಾನ್, ಶೀಬಾ ರಾಮಚಂದ್ರನ್, ಜೋಕಿಂ ಡಿ ಸೋಜ, ಧನುಂಜಯ ಅಡ್ಪಂಗಾಯ, ವೆಂಕಪ್ಪ ಗೌಡ, ನಝೀರ್ ಬಜಾರ್, ಕೌಶಲ್ ಶೆಟ್ಟಿ, ಕೃಪಾ ಅಮರ್ ಆಳ್ವ, ಪ್ರಸಾದ್ ಪಾಣಾಜೆ, ಸುದೀಪ್ ಕುಮಾರ್ ಶೆಟ್ಟಿ, ಮಮತಾ ಗಟ್ಟಿ, ಎಂ.ಎಸ್. ಮುಹಮ್ಮದ್, ಪದ್ಮಶೇಖರ್ ಜೈನ್, ಉಮೇಶ್ ಸಪಲ್ಯ, ಮಾಯಿಲಪ್ಪ ಸಾಲ್ಯಾನ್, ಜನಾರ್ಧನ ಚೆಂಡ್ತಿಮಾರ್, ಅಬ್ಬಾಸ್ ಅಲಿ, ಲುಕ್ಮಾನ್ ಬಂಟ್ವಾಳ, ಫಾರೂಕ್ ಬಯಬೆ, ಹಾಜಿ.ಎ. ಉಸ್ಮಾನ್ ಕರೋಪಾಡಿ, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಮಹಮ್ಮದ್ ಶರೀಫ್, ಸುಭಾಶ್ಚಂದ್ರ ಶೆಟ್ಟಿ, ಸಂಜೀವ ಪೂಜಾರಿ, ನಾರಾಯಣ ನಾಯ್ಕ್ , ನ್ಯಾಯವಾದಿಗಳಾದ ಚಂದ್ರ ಶೇಖರ ಪೂಜಾರಿ, ಚಿದಾನಂದ ಕಡೇಶ್ವಾಲ್ಯ, ಸುರೇಶ್ ಬಿ. ನಾವೂರ, ಎ.ಪಿ. ಮೊಂತೆರೋ, ರಮಾನಾಥ ರೈ ಯವರ ಧರ್ಮಪತ್ನಿ ಧನಭಾಗ್ಯ ರೈ, ಸಹೋದರಿ ಚೆನ್ನವೇಣಿ ಎಂ.ಶೆಟ್ಟಿ ಮತ್ತು ಪಕ್ಷದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರುಗಳು, ಪ್ರಮುಖರುಗಳು ಉಪಸ್ಥಿತರಿದ್ದರು.

ರಮಾನಾಥ ರೈಗಳ ಮಗಳು ಚರಿಷ್ಮಾ ರೈ ಮೆರವಣಿಗೆಯ ಆರಂಭದಿಂದ ಕೊನೆವರೆಗೂ ಇದ್ದು, ಕಾರ್ಯಕರ್ತರನ್ನು ಹುರಿದುಂಬಿಸಿದರು.

ಹೂಮಳೆ

ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ರೈಗಳ ಅಭಿಮಾನಿಗಳು ಹೂವಿನ ಮಳೆಗೈದು ಶುಭ ಕೋರಿದರು. ಮೆರವಣಿಗೆ ಸಾಗಿ ಬಂದ ರಸ್ತೆಯುದ್ದಕ್ಕೂ ಅಪಾರ ಸಂಖ್ಯೆಯ ಜನರು ಮೆರವಣಿಗೆ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿಯೂ ನಿಂತಿದ್ದರು.

ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ.
ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದ ಬಳಿಯಿಂದ ಮೆರವಣಿಗೆ ಆರಂಭಕ್ಕೂ ಮುನ್ನಾ ಬಿ. ರಮಾನಾಥ ರೈಯವರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೊಡಂಕಾಪು ಚರ್ಚ್‍ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಿತ್ತಬೈಲು ಮೊಯಿಯುದ್ದೀನ್ ಜುಮಾ ಮಸೀದಿ, ಬಂಟ್ವಾಳ ಕೆಳಗಿನಪೇಟೆ ಮಸೀದಿಯಲ್ಲೂ ಪ್ರಾರ್ಥಿಸಿದರು. ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಹೌದು, ಹಳೇ ಮುಖವಾದರೂ ಬಣ್ಣ ಬದಲಿಸಿಲ್ಲ,ರೈ

ಕಾಂಗ್ರೆಸ್ ನಲ್ಲಿ ಒಬ್ಬರೇ ಸ್ಪರ್ಧಿಸುವುದು ಎಂದು ಪ್ರತಿ ಪಕ್ಷದವರು ಇತ್ತೀಚೆಗೆ ಲೇವಡಿ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿದ ರಮಾನಾಥ ರೈ, ಹೌದು, ತಮ್ಮದು ಹಳೇ ಮುಖವಾದರೂ, ತಾವು ಯಾವತ್ತೂ ಬಣ್ಣ ಬದಲಿಸಿಲ್ಲ, ತಮ್ಮದು ಒಂದೇ ಬಣ್ಣ, ಒಂದೇ ಅಂಗಿ, ಒಂದೇ ಚಿಹ್ನೆ, ಒಂದೇ ಸಿದ್ಧಾಂತ, ಒಂದೇ ಪಕ್ಷ, ಒಂದೇ ಧ್ವಜ ಎಂದವರು ತಿರುಗೇಟು ನೀಡಿದರು.