ಡೈಲಿ ವಾರ್ತೆ:25 ಏಪ್ರಿಲ್ 2023

ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ : ಶ್ರೀಪಾದ ನಾಯ್ಕ

ವರದಿ: ವಿದ್ಯಾಧರ ಮೊರಬಾ

ಅಂಕೋಲಾ : ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಪರ ಮತಯಾಚಿಸಲು ಮಂಗಳವಾರ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯ್ಕ ಪಟ್ಟಣದ ಮಹಾಮಾಯಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.

ನಂತರ ಅವರು ಪಟ್ಟಣದ ವಿವಿಧ ವಾರ್ಡ್‍ಗೆ ಭೇಟಿ ನೀಡಿ ಬಿಜೆಪಿ ಕಾರ್ಯಕರ್ತರ ಉದ್ದೇಶಿಸಿ ಮಾತ ನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಗಳನ್ನು ಮಾಡಿದೆ. ಹಾಗೇ ರಾಜ್ಯದಲ್ಲಿಯೂ ಕೂಡ ಬಿಜೆಪಿ ಉತ್ತಮ ಆಡಳಿತ ಮಾಡಿದೆ. ಹೀಗಾಗಿ ಮತ್ತೊಮ್ಮೆ ಬಿಜೆಪಿಗೆ ಮತದಾರರು ಅವಕಾಶ ನೀಡಬೇಕು. ಶಾಸಕಿ ರೂಪಾಲಿ ನಾಯ್ಕ ಅವರಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಬೇಕು. ಇದರಿಂದಾಗಿ ಈ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಸಾಧ್ಯ. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ನನ್ನ ಕ್ಷೇತ್ರದ ಜನರು ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ಆಸೆಯಿದೆ. ಹಲವು ವರ್ಷಗಳಿಂದ ಆಗದ ಕೆಲಸವನ್ನು 5 ವರ್ಷಗಳಲ್ಲಿ ನಾನು ಮಾಡಿದ್ದೇನೆ. ಮುಂದಿನ ಅವಧಿಯಲ್ಲಿ ಇಡೀ ಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ನಮ್ಮ ಕಾರ್ಯಕರ್ತರು ನನ್ನ ಗೆಲುವಿನ ರೂವಾರಿಗಳು ಎಂದರು.

ಈ ಸಂದರ್ಭದಲ್ಲಿ ಎಂ.ಎಲ್.ಸಿ. ಗಣಪತಿ ಉಳ್ವೇಕರ, ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ, ಬಿಜೆಪಿ ಮುಖಂಡರಾದ ಭಾಸ್ಕರ ನಾರ್ವೇಕರ, ನಾಗರಾಜ ನಾಯಕ, ಸಂತೋಷ ನಾರ್ವೇಕರ್, ಬಿಂದೇಶ ನಾಯಕ ಹಿಚ್ಕಡ, ಗಣಪತಿ ನಾಯ್ಕ, ನಾಗೇಂದ್ರ ನಾಯ್ಕ, ನಾಗರಾಜ ಐಗಳ, ರಾಜೇಶ್ವರಿ ಕೇಣ ಕರ್, ಅನುರಾಧಾ ನಾಯ್ಕ, ಆರತಿ ಗೌಡ, ಭಾಗ್ಯಲಕ್ಷ್ಮೀ ನಾಯಕ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.