ಡೈಲಿ ವಾರ್ತೆ:26 ಏಪ್ರಿಲ್ 2023

ಕಡಬ:ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು.!

ಕಡಬ: ಬೈಕೊಂದು ಅಪಘಾತವಾಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ – ಪಂಜ ರಸ್ತೆಯ ಕಲ್ಲಂತಡ್ಕದ ಸ್ಮಶಾನ ಬಳಿ ಮಂಗಳವಾರ ರಾತ್ರಿ ನಡೆದಿದೆ.

ದಾವಣಗೆರೆ ಮೂಲದ ಪ್ರಸ್ತುತ ಕೋಡಿಂಬಾಳದಲ್ಲಿ ವಾಸವಿರುವ ಮಂಜು ಸಾವನ್ನಪ್ಪಿದ ಸವಾರ ಎಂದು ತಿಳಿದು ಬಂದಿದೆ.

ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಇವರು ಬೈಕಿನಲ್ಲಿ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿರಬಹುದು ಎನ್ನಲಾಗಿದೆ.

ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಡಬ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಕಡಬ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಮರಳು ಸಾಗಾಟದ ಲಾರಿಯ ಅವಾಂತರವೆ?: ಕೋಡಿಂಬಾಳ ರಸ್ತೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸವಾರ ಏಕಾಏಕಿ ರಸ್ತೆ ಚರಂಡಿಗೆ ಬಿದ್ದಿರುವುದಾಗಿ ಒಂದು ಸುದ್ದಿಯಾದರೆ ಇನ್ನೊಂದು ಕಡೆ ವೇಗವಾಗಿ ಬಂದ ಲಾರಿಯ ಅವಾಂತರದಿಂದ ಈ ಘಟನೆ ನಡೆದಿರಬಹುದೆಂಬ ವದಂತಿಗಳು ಹರಿದಾಡುತ್ತಿದೆ. ಕಡಬ ಸುತ್ತಮುತ್ತ ಅಕ್ರಮ ಮರಳು ಸಾಗಾಟದ ಲಾರಿಗಳು ರಾತ್ರಿ ವೇಳೆ ಅಧಿಕವಾಗಿ ಸಂಚರಿಸುತ್ತಿದ್ದು ಇದನ್ನು ಅಲ್ಲಗಲೆಯುವಂತಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಪೊಲೀಸರ ಸೂಕ್ತ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ.