ಡೈಲಿ ವಾರ್ತೆ:30 ಏಪ್ರಿಲ್ 2023

ದ್ವಾರಕೀಶ್ ನಿಧನರಾಗಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ:ಸಾವಿನ ವದಂತಿ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಹಿರಿಯ ನಟ ದ್ವಾರಕೀಶ್

ಬೆಂಗಳೂರು: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗಿದ್ದು, ಈ ಬಗ್ಗೆ ಸ್ವತಃ ದ್ವಾರಕೀಶ್ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ವಿಡಿಯೊ ಹಂಚಿಕೊಂಡಿರುವ ಅವರು, ”ನಾನು ದ್ವಾರಕೀಶ್, ನೀವು ಸಾಕಿದ ದ್ವಾರಕೀಶ್‌, ನೀವು ಬೆಳೆಸಿದ ದ್ವಾರಕೀಶ್, ಚೆನ್ನಾಗಿದ್ದೇನೆ, ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ಗಟ್ಟಿಮುಟ್ಟಾಗಿದ್ದೀನಿ, ಯಾವುದೇ ಚಿಂತೆ ಇಲ್ಲ. ಗಟ್ಟಿಮುಟ್ಟಾಗಿದ್ದೇನೆ. ನಗುನಗುತ್ತಾ ಇದ್ದೇನೆ. ನಿಮ್ಮ ವಿಶ್ವಾಸ, ಪ್ರೀತಿ, ಆಶೀರ್ವಾದ ಇರುವವರೆಗೂ ನನಗೆ ಏನೂ ಆಗಲ್ಲ” ಎಂದು ತಿಳಿಸಿದ್ದಾರೆ.

ಇಂದು (ಎ.30) ಮುಂಜಾನೆಯಿಂದಲೂ ಫೇಸ್‌ಬುಕ್‌, ವಾಟ್ಸಪ್ ಗಳಲ್ಲಿ ನಟ ದ್ವಾರಕೀಶ್ ನಿಧನ, ಇನ್ನಿಲ್ಲ ಎಂಬ ಸುಳ್ಳು ವದಂತಿ ಹಬ್ಬಿತ್ತು. ಇದನ್ನ ನೋಡಿದ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದರು.