ಡೈಲಿ ವಾರ್ತೆ:30 ಏಪ್ರಿಲ್ 2023

ಬಂಟ್ವಾಳ ವಿಧಾನ ಸಭಾ ಕ್ಷೇತ್ರಲ್ಲಿ ನಡೆದ ಮಹಾ ಅಭಿಯಾನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ ; ರಾಜೇಶ್ ನಾಯ್ಕ್

ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರಲ್ಲಿ ನಡೆದ ಮಹಾ ಅಭಿಯಾನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ತಿಳಿಸಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಮನೆ ಮನೆ ಸಂಪರ್ಕ ಮಾಡುವ ಮಹಾ ಸಂಪರ್ಕ ಅಭಿಯಾನ ವನ್ನು ಏಪ್ರಿಲ್ 30 ಭಾನುವಾರದಂದು ಹಮ್ಮಿಕೊಂಡಿದ್ದು ಪಕ್ಷದ ಜವಾಬ್ದಾರಿ ಇರುವ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತೀ ಮತಕಟ್ಟೆಗಳಲ್ಲಿ ಒಟ್ಟು ಸೇರಿ ಸೂಕ್ತ ಯೋಜನೆಯೊಡನೆ ಮನೆ- ಮನೆ ಪ್ರಚಾರವನ್ನು ಕ್ಷೇತ್ರದ 249 ಬೂತುಗಳಲ್ಲಿ ಯಶಸ್ವಿಗೊಳಿಸಿದ್ದಕ್ಕಾಗಿ ಕಾರ್ಯಕರ್ತರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಬಂಟ್ವಾಳ ಮಂಡಲದಲ್ಲಿ ಜಿಲ್ಲಾ ಕ್ಷೇತ್ರ ಮಟ್ಟದ ಪ್ರಮುಖರು ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಬೂತು ಸಮಿತಿಯ ಸದಸ್ಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ. ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ 150 ಕ್ಕೂ ಅಧಿಕ ವಿಧಾನ ಸಭಾ ಕ್ಷೇತ್ರಗಳನ್ನು ಗೆಲ್ಲುವ ಸಲುವಾಗಿ ಬೂತು ಕಾರ್ಯಕರ್ತರಿಂದ ರಾಷ್ಟ್ರೀಯ ನಾಯಕರವರೆಗೆ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಯಾಗಿಸಿದ್ದಾರೆ ಎಂದು ಅವರು ತಿಳಿಸಿದರು.

ಕ್ಷೇತ್ರದ ಮನೆ ಸಂಪರ್ಕ ಮಾಡುವ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮ ಈ ಬಾರಿಯ ಚುನಾವಣೆಗೆ ಶಕ್ತಿ ನೀಡಲಿದ್ದು, ಮೇ. 10 ರಂದು ನಡೆಯುವ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಗೆಲುವಿಗೆ ಪೂರಕವಾಗಲಿದೆ. ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದ್ದು, ಗ್ರಾಮ ಗ್ರಾಮಗಳಲ್ಲಿ ಬಿಜೆಪಿಯತ್ತ ಜನ ಒಲವು ತೋರಿದ್ದಾರೆ ಎಂದು ಅವರು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ರಾಜ್ಯದ ವಿವಿಧ ಯೋಜನೆಗಳ ಬಗ್ಗೆ ಮತ್ತೆ ಮತದಾರರಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾ ಅಭಿಯಾನ ಕಾರ್ಯಕ್ರಮದ ಮೂಲಕ ವಿರೋಧಿಗಳಿಗೆ ಸಂದೇಶ ನೀಡುವ ಕೆಲಸ ಕಾರ್ಯಕರ್ತರು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.