ಡೈಲಿ ವಾರ್ತೆ:07 ಮೇ 2023

ತರೀಕೆರೆ: ಮಾಜಿ‌ ಶಾಸಕರ ಮೇಲೆ ಹಲ್ಲೆಗೈದು, ಮನೆ ದರೋಡೆ

ಚಿಕ್ಕಮಗಳೂರು: ತರೀಕೆರೆ ಮಾಜಿ ಶಾಸಕ ಎಸ್.ಎಂ.ನಾಗರಾಜ್ ಅವರ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ದರೋಡೆಗೈದ ಘಟನೆ ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿರುವ ಮಾಜಿ ಶಾಸಕ ಎಸ್.ಎಂ.ನಾಗರಾಜ್ ಅವರ ತೋಟದ ಮನೆಯಲ್ಲಿ ಶನಿವಾರ ತಡರಾತ್ರಿ ಈ ದರೋಡೆ ನಡೆದಿದೆ. ಬಂದೂಕು, ಮಚ್ಚು ಸಹಿತ ಮಾರಕಾಸ್ತ್ರಗಳೊಂದಿಗೆ ಮನೆಯ ಬಾಗಿಲು ಮುರಿದು ಒಳ ನುಗ್ಗಿದ 15ಕ್ಕೂ ಅಧಿಕ ಮಂದಿಯಿದ್ದ ದುಷ್ಕರ್ಮಿಗಳ ತಂಡ ಎಸ್.ಎಂ.ನಾಗರಾಜ್ ಅವರ ಮೇಲೆ ಹಲ್ಲೆ ನಡೆಸಿದೆ. ಬಳಿಕ ಒಂದು ಕೆಜಿಗೂ ಅಧಿಕ ಚಿನ್ನಾಭರಣ, ನಗದು ದರೋಡೆಗೈದು ಪರಾರಿಯಾಗಿದೆ ಎಂದು ಹೇಳಲಾಗಿದೆ.

ಚುನಾವಣೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಸ್ಥಳಕ್ಕೆ ಎಸ್ಪಿ ಉಮ ಪ್ರಶಾಂತ್ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗೆ ಶೋಧ ಮುಂದುವರೆದಿದೆ.