ಡೈಲಿ ವಾರ್ತೆ:14 ಮೇ 2023

ಕುಂದಾಪುರ: ಬಿಜೆಪಿ ವಿಜಯೋತ್ಸವ ಮೆರವಣಿಗೆಯಲ್ಲಿ ಹಲ್ಲೆ: ದೂರು-ಪ್ರತಿದೂರು ದಾಖಲು

ಕುಂದಾಪುರ: ಬಿಜೆಪಿಯ ವಿಜಯೋತ್ಸವದ ವೇಳೆ ಬಿಜೆಪಿಯ ಮೂವರು ಕಾರ್ಯಕರ್ತರು ಯುವಕರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು, ಆಯುಧಗಳಿಂದ ಹಲ್ಲೆ ನಡೆಸಿದ ಘಟನೆ ಶಂಕರನಾರಾಯಣ ಗ್ರಾಮದ ಆಶ್ರಯ ಕಾಲೋನಿ ಬಳಿ ಮೇ 13ರಂದು ಸಂಜೆ 7.30ರ ಸುಮಾರಿಗೆ ನಡೆದಿದೆ.

ಸ್ಥಳೀಯ ಬಿಜೆಪಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಮೆರವಣಿಗೆಯಲ್ಲಿದ್ದ ರಂಜಿತ್ ಮೊಗವೀರ, ವಿಜೇತ್ ಮೊಗವೀರ ಹಾಗೂ ಅರುಣ್ ಎಂಬವರು ಅಲ್ಲೇ ನಿಂತಿದ್ದ ಆಶ್ರಯ ಕಾಲೋನಿಯ ಸಂತೋಷ ಪೂಜಾರಿ(32) ಹಾಗೂ ಆತನ ಸ್ನೆಹಿತ ರಕ್ಷಿತ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ಬಳಿಕ ಇವರಿಬ್ಬರನ್ನು ಅಡ್ಡಗಟ್ಟಿದ ಆರೋಪಿಗಳು ದೊಣ್ಣೆಯಿಂದ ಮತ್ತು ಹರಿತವಾದ ಆಯುಧದಿಂದ ಹೊಡೆದು ಕೊಲೆ ಬೆದರಿಕೆ ಹಾಕಿ ಹೋಗಿರುವುದಾಗಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಕಲ್ಲುಗದ್ದೆಯ ಉಮೇಶ ಶೆಟ್ಟಿ ಹಾಗೂ ಆತನ ಸ್ನೆಹಿತರಾದ ಅರುಣ, ರಂಜೀತ್ ಹಾಗೂ ವಿಜೇತ್ ಎಂಬವರು ಕ್ರೋಡಬೈಲೂರಿನ ಆಶ್ರಯ ಕಾಲೋನಿ ಬಳಿ ಹೋಗುತ್ತಿರುವಾಗ ಸಂತೋಷ ಪೂಜಾರಿ ಹಾಗೂ ರಕ್ಷಿತ್ ಪೂಜಾರಿ ಎಂಬವರು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಕೊಲೆ ಬೆದರಿಕೆ ಹಾಕಿ ಹೋಗಿರುವುದಾಗಿ ಪ್ರತಿದೂರು ನೀಡಲಾಗಿದೆ.