ಡೈಲಿ ವಾರ್ತೆ: 17 ಮೇ 2023

ಕಾಪು; ಕಾರುಗಳ ನಡುವೆ ಭೀಕರ ಅಪಘಾತದ ಗಾಯಾಳು ವ್ಯಕ್ತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ್ಯು,

ಕಾಪು;ನ್ಯಾನೊ ಕಾರು ಮತ್ತು ಡಸ್ಟರ್‌ ಕಾರು ಪರಸ್ಪರ ಢಿಕ್ಕಿ ಹೊಡೆದುಕೊಂಡು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು ಮೂರು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಕಟ್ಟಿಕೆರೆ ಬಳಿ ನಡೆದಿದೆ.
ಮೃತರು ಮಜೂರು ಚಂದ್ರನಗರದ ಸಂಬಂಧಿಕರ ಮನೆಗೆ ಆಗಮಿಸುತ್ತಿದ್ದ ಕೊಪ್ಪ ಮೂಲದ ಇಮ್ತಿಯಾಜ್ (40) ಎಂದು ಗುರುತಿಸಲಾಗಿದೆ.

ಉಡುಪಿಯಿಂದ ಕಾಪುವಿನತ್ತ ಆಗಮಿಸುತ್ತಿದ್ದ ನ್ಯಾನೋ ಕಾರಿಗೆ, ಹಿಂದಿನಿಂದ ಬಂದ ಡಸ್ಟರ್‌ ಕಾರು ಢಿಕ್ಕಿ ಹೊಡೆದಿದೆ. ಡಸ್ಟರ್‌ ಕಾರು ಢಿಕ್ಕಿ ಹೊಡೆದ ರಭಸಕ್ಕೆ ನ್ಯಾನೋ ಕಾರು ರಸ್ತೆ ಬದಿಯಲ್ಲಿದ್ದ ಲೈಟ್‌ ಕಂಬಕ್ಕೆ ಢಿಕ್ಕಿಯಾಗಿ ಪಲ್ಟಿಯಾಗಿತ್ತು.

ನ್ಯಾನೋ ಕಾರಿನಲ್ಲಿದ್ದ ಇಮ್ತಿಯಾಜ್ ಸಹಿತ ನಾಲ್ಕು ಮಂದಿಗೆ ಪೆಟ್ಟಾಗಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳ ಪೈಕಿ ಇಮ್ತಿಯಾಜ್ ಅವರಿಗೆ ತೀವ್ರ ಏಟಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇನ್ನು ಅಪಘಾತದಲ್ಲಿ ಶೈನಾಜ್‌ (31) ತಾಹಿರಾ (38), ಶಮ್ನಾ (6) ಇವರು ಗಾಯಗೊಂಡಿದ್ದಾರೆ.

ಡಸ್ಟರ್‌ ಕಾರಿನ ಚಾಲಕ ಸುರೇಶ್‌ ಶೆಟ್ಟಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.