ಡೈಲಿ ವಾರ್ತೆ:25 ಮೇ 2023

ಬೆಂಗಳೂರು:ದುಷ್ಕರ್ಮಿಗಳ ಅಟ್ಟಹಾಸ – ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ.!

ಬೆಂಗಳೂರು:ಬೆಂಗಳೂರಿಲ್ಲಿ ತಡರಾತ್ರಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ರವಿ ಅಲಿಯಾಸ್ ಮತ್ತಿರವಿ (42) ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತ.

ಲಗ್ಗೆರೆ ಬಳಿಯ ಚೌಡೇಶ್ವರಿನಗರದಲ್ಲಿ ರಾತ್ರಿ ವೇಳೆ ಈ ಕೊಲೆ ಪ್ರಕರಣ ನಡೆದಿದೆ.
ಚೌಡೇಶ್ವರಿನಗರದ ಹಳ್ಳಿರುಚಿ ಹೊಟೇಲ್ ಮುಂಭಾಗ ಕೈ ಕಾರ್ಯಕರ್ತನ ಕೊಲೆ ನಡೆದಿದ್ದು, ಸಿಎಂಹೆಚ್ ಬಾರ್ ಬಳಿಯಿಂದ ರವಿಯನ್ನ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಕೊನೆಗೆ ಹಳ್ಳಿರುಚಿ ಹೊಟೇಲ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸಾಲದೆಂಬಂತೆ ಆತನ ತಲೆಯ ಮೇಲೆ ಸೈಜ್ ಕಲ್ಲು ಎತ್ತಾಕಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಬೈಕ್ಗಳಲ್ಲಿ ಬಂದ ಐದಾರು ಮಂದಿ ಈ ಕೃತ್ಯ ಎಸಗಿದ್ದಾರೆ. ಇನ್ನು ಹತ್ಯೆಗೂ ಮುನ್ನ ಹಂತಕರು ಈ ಏರಿಯಾದಲ್ಲಿ ಹಾಕಿದ್ದ ಪ್ಲೆಕ್ಸ್ಗಳಲ್ಲಿದ್ದ ರವಿಕುಮಾರ್ ಪೋಟೋ ಹರಿದು ಹಾಕಿದ್ದರು.
ವೃತ್ತಿಯಲ್ಲಿ ಟೆಂಪೋ ಟ್ರಾವೆಲರ್ ಚಾಲಕ ಹಾಗೂ ಮೇಕೆ ಸಾಕಾಣಿಕೆದಾರನಾಗಿದ್ದ ರವಿ, ಸಂಜೆ ಕೆಲಸ ಮುಗಿಸಿ ಮನೆ ಹತ್ತಿರ ತೆರಳಿದ್ದ. ಆ ಬಳಿಕ ಬಾರ್ಗೆ ಬಂದು ಕಂಠಪೂರ್ತಿ ಕುಡಿದು ಏರಿಯಾದಲ್ಲಿ ಕೃಷ್ಣಮೂರ್ತಿ ಎಂಬ ಕಾಂಗ್ರೆಸ್ ಮುಖಂಡನ ಬರ್ತಡೆ ಪಾರ್ಟಿಯಲ್ಲಿ ಭಾಗಿಯಾಗಿದ್ದ. ಪಾರ್ಟಿ ಮುಗಿಸಿ ರವಿ ಮನೆಯತ್ತ ಹೆಜ್ಜೆ ಹಾಕಿದ್ದ, ಆತ ಬರುವುದನ್ನೇ ಕಾದು ಕುಳಿತಿದ್ದ ಹಂತಕರು ಅಟ್ಯಾಕ್ ಮಾಡಿದ್ದಾರೆ. ತಪ್ಪಿಸಿಕೊಳ್ಳೋ ಭರದಲ್ಲಿ ಓಡಿದ ರವಿಯನ್ನ ಅಟ್ಟಾಡಿಸಿ ಹತ್ಯೆಗೈಯ್ಯಲಾಗಿದೆ. ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸ್ರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಶವವನ್ನ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿರೋ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂಕತರ ಪತ್ತೆಗೆ ಬಲೆ ಬೀಸಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.