ಡೈಲಿ ವಾರ್ತೆ: 31 ಮೇ 2023

ಮಂಗಳೂರು: ಹಲ್ಲೆ ಮಾಡಿ ತ್ರಿವಳಿ ತಲಾಕ್ ಹೇಳಿದ ಪತಿ: ಪ್ರಕರಣ ದಾಖಲು

ಮಂಗಳೂರು: ತ್ರಿವಾಳಿ ತಲಾಖ್ ಆರೋಪದ ಮೇಲೆ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಾಗಿದೆ.

ನಗರದ ಮಾರ್ನಮಿಕಟ್ಟೆಯ ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳಾದ ಮುಹಮ್ಮದ್ ಹುಸೇನ್ ಹಾಗೂ ಆತನ ಹೆತ್ತವರ ಮೇಲೆ ಪತ್ನಿ ಶಬಾನಾ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಬೋಳಾರ ಸಮೀಪದ ಮುಳಿಹಿತ್ಲು ನಿವಾಸಿ ಶಬಾನಾ ಅವರಿಗೆ ಹುಸೇನ್ ಜೊತೆಗೆ ಆರು ತಿಂಗಳ ಮೊದಲು ವಿವಾಹವಾಗಿತ್ತು.
ಮದುವೆಯಾದ 8 ದಿನಗಳಲ್ಲಿ ಹುಸೇನ್ ಚಿನ್ನಾಭರಣಗಳನ್ನು ಕೊಂಡೊಯ್ದಿದ್ದ. ಬಳಿಕ ಶಬಾನಾಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಇದಲ್ಲದೆ ಆಕೆ ಗರ್ಭಿಣಿಯಾದಾಗ ಮಗು ಬೇಡ ಎಂದು ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ್ದಾನೆ.ಬೇರೆ ಹೆಂಗಸರ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ನಿಂದಿಸಿ ಕಿರುಕುಳ‌ ನೀಡಿದ್ದಾನೆ ಮತ್ತು ವರದಕ್ಷಿಣೆ ತರುವಂತೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಇದೀಗ ಹುಸೇನ್ ಮತ್ತು ಅತನ ತಂದೆ ತಾಯಿ ಮೇಲೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.