ಡೈಲಿ ವಾರ್ತೆ: 31 ಮೇ 2023

ಪುಷ್ಪ2: ಶೂಟಿಂಗ್‌ಗೆ ತೆರಳಿದ್ದ ಕಲಾವಿದರ ಬಸ್‌ ಅಪಘಾತ

ತೆಲುಗಿನ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದೆ. ಇತ್ತೀಚಿಗೆ ‘ಪುಷ್ಪ 2’ ಸಿನಿಮಾದ ನಿರ್ಮಾಣ ಸಂಸ್ಥೆಯ ಮೇಲೆ ಐಟಿ ದಾಳಿ ನಡೆದಿತ್ತು. ಇದೀಗ ‘ಪುಷ್ಪ 2’ ಶೂಟಿಂಗ್‌ನಲ್ಲಿ ಭಾಗಿಯಾಗಿ ವಾಪಸ್ ತೆರಳುತ್ತಿದ್ದ ಕಲಾವಿದರ ಬಸ್‌ಗೆ ಅಪಘಾತಕ್ಕೆ ಒಳಗಾಗಿದೆ. ಈ ಸುದ್ದಿ ಕೇಳಿ ಅಲ್ಲು ಅರ್ಜುನ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾದಲ್ಲಿ ನಟಿಸುತ್ತಿದ್ದ ಸಹ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿ ವಾಪಸ್ ತೆರಳುತ್ತಿದ್ದ ವೇಳೆಯಲ್ಲಿ ಅವಘಡ ಸಂಭವಿಸಿದೆ. ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡು ವಾಹನ ನುಜ್ಜುಗುಜ್ಜಾಗಿದೆ. ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕೆಟ್ಟು ಹೋಗಿತ್ತು. ಆ ಬಸ್ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ‘ಪುಷ್ಪ 2’ ಸಿನಿಮಾದ ಕಲಾವಿದರನ್ನು ಕರೆದು ತರುತ್ತಿದ್ದ ಬಸ್‌ನ ಚಾಲಕನಿಗೆ ಕೆಟ್ಟು ನಿಂತಿದ್ದ ಬಸ್ ಕಾಣಿಸಲಿಲ್ಲ. ಆದ್ದರಿಂದ ಡಿಕ್ಕಿ ಹೊಡೆದಿದೆ ಎಂದು ತೆಲುಗು ಮಾಧ್ಯಮದಲ್ಲಿ ವರದಿ ಆಗಿದೆ. ತೆಲಂಗಾಣದ ನೆಲ್ಗೊಂಡ ಜಿಲ್ಲೆಯ ಹೈದರಾಬಾದ್-ವಿಜಯವಾಡ ಹೈವೇಯಲ್ಲಿ ಈ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ಇದ್ದ ಇಬ್ಬರಿಗೆ ಗಾಯವಾಗಿದೆ.