ಡೈಲಿ ವಾರ್ತೆ: 23 ಜೂನ್ 2023

ಆಸ್ತಿ ವಿವಾದ – ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಚಾಮರಾಜನಗರ : ಆಸ್ತಿ ವಿವಾದದಿಂದ ಕಂಗೆಟ್ಟು ಗಂಡ – ಹೆಂಡತಿ ಹಾಗೂ ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ನಡೆದಿದೆ.

ಪತಿ ಮಹಾದೇವಸ್ವಾಮಿ (42), ಪತ್ನಿ ಸವಿತಾ(33) ಹಾಗೂ ಮಗಳು ಸಿಂಚನಾ(15) ಮೃತರು.
ಡೆತ್ ನೋಟ್ ಸಹ ಬರೆದಿಟ್ಟಿದ್ದು, ಮೃತನ ಅಕ್ಕ – ತಂಗಿಯರ ಹೆಸರು ಉಲ್ಲೇಖಿಸಿ ಇವರಿಗೆಲ್ಲಾ ಶಿಕ್ಷೆ ಆಗಬೇಕು ಎಂದು ಕೋರಿಕೊಂಡಿದ್ದಾರೆ.

ಮಹಾದೇವಸ್ವಾಮಿ ಮೂಲತಃ ಕೃಷಿಕರಾಗಿದ್ದು, ಸವಿತಾ ಟೈಲರಿಂಗ್ ಮಾಡುತ್ತಿದ್ದರಂತೆ. ಇವರಿಗೆ ಇಬ್ಬರು ಪುತ್ರಿಯರಿದ್ದು ಓರ್ವ ಪುತ್ರಿ ಕಾಲೇಜು ವ್ಯಾಸಂಗ ಮಾಡುತ್ತಾ ತಾತನ ಮನೆಯಲ್ಲಿದ್ದಾರೆ. ಕಿರಿಯ ಮಗಳು ಸಿಂಚನಾ 9 ನೇ ತರಗತಿ ಓದುತ್ತಿದ್ದು, ಅಪ್ಪ-ಅಮ್ಮನ ಜೊತೆ ಇದ್ದಳು. ಸದ್ಯಕ್ಕೆ ಮೂವರು ಸಾವಿಗೆ ಶರಣಾಗಿದ್ದು ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.
ಸ್ಥಳಕ್ಕೆ ಜಿಲ್ಲಾ ಎಸ್ಪಿ ಪದ್ಮಿನಿ ಸಾಹು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.