ಡೈಲಿ ವಾರ್ತೆ: 30 ಜೂನ್ 2023

ಶಿಕಾರಿಪುರ:ಗೋಮಾಂಸ ಸಾಗಾಟ ವಿಚಾರ – ಎರಡು ಗುಂಪುಗಳ ನಡುವೆ ಗಲಾಟೆ, ಎಸ್‌ಪಿ ಭೇಟಿ

ಶಿವಮೊಗ್ಗ: ಗೋಮಾಂಸ ಹಾಗೂ ಚರ್ಮ ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಿಲ್ಲೆಯ ಶಿಕಾರಿಪುರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಅಲ್ಲದೇ, ಪೊಲೀಸ್ ಠಾಣೆ ಮುಂದೆಯೂ ಯುವಕರು ತಳ್ಳಾಟ, ನೂಕಾಟ ನಡೆಸಿದ್ದಾರೆ.

ಶಿಕಾರಿಪುರ ತಾಲೂಕು ಮಳಲಿಕೊಪ್ಪ ಬಳಿ ಕೆಲವರು ದನದ ಮಾಂಸ ಸಾಗಾಟ ಮಾಡುವಾಗ ಕೆಲ ಸಂಘಟನೆ ಕಾರ್ಯಕರ್ತರು ವಾಹನ ತಡೆದಿದ್ದಾರೆ. ಬಳಿಕ ದನದ ಚರ್ಮ
ಹಾಗೂ ಮಾಂಸ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರ ಸಮ್ಮುಖದಲ್ಲಿ ಹಿಡಿದುಕೊಂಡು ಠಾಣೆಗೆ ತರಲಾಗಿತ್ತು. ಈ ವೇಳೆ ಎರಡೂ ಕಡೆಯ ಯುವಕರು ಪೊಲೀಸ್ ಠಾಣೆ ಮುಂದೆ ಜಮಾವಣೆ ಆಗಿದ್ದರು.

ಈ ಸಂದರ್ಭದಲ್ಲಿ ಯುವಕರು ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಗುಂಪನ್ನು ಚದುರಿಸಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ ಕುಮಾರ್ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.