ಡೈಲಿ ವಾರ್ತೆ:06 ಜುಲೈ 2023

ಶಿವಾಜಿನಗರ ಮಸೀದಿಯಲ್ಲಿ ಬಾಂಬ್: ತಡರಾತ್ರಿ ಬಂದ ಫೋನ್ ಕರೆಗೆ ಬೆಚ್ಚಿ ಬಿದ್ದ ಬೆಂಗಳೂರು ಪೊಲೀಸರು!

ಬೆಂಗಳೂರು: ನಿನ್ನೆ ತಡರಾತ್ರಿ ಶಿವಾಜಿನಗರದ ಮಸೀದಿಯೊಂದರಲ್ಲಿ ಬಾಂಬ್ ಇದೆ ಎಂದು ಅನಾಮಧೇಯ ಕರೆ ಬಂದಿದ್ದು ಪೊಲೀಸರು ನಿದ್ದೆಗೆಡುವಂತೆ ಆಗಿತ್ತು.
ರಾತ್ರಿ 10 ಗಂಟೆ ಸುಮಾರಿಗೆ 112ಕ್ಕೆ ಈ ಕರೆ ಬಂದಿದ್ದು, ಬೆಚ್ಚಿಬಿದ್ದಿದ್ದ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ.

ಈ ಅನಾಮಧೇಯ ವ್ಯಕ್ತಿ, ಟೆರೆರಿಸ್ಟ್ಗಳು ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಕರೆ ಮಾಡಿದ್ದ.
ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಶಿವಾಜಿನಗರದ ಪೊಲೀಸರು, ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಂಬ್ ಬೆದರಿಕೆ ಇದ್ದ ಕಾರಣ ಇಡೀ ಮಸೀದಿಯಲ್ಲಿ ಹುಡುಕಾಟ ನಡೆಸಿದ್ದು ಜತೆಗೆ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಿದ್ದಾರೆ.

ಕೊನೆಗೆ ಇದು ಸುಳ್ಳು ಮಾಹಿತಿಯ ಪ್ರಕರಣ ಎಂದು ತಿಳಿದುಬಂದಾಗ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಪೊಲೀಸರು ನಿದ್ದೆ ಕೆಡಿಸಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸದ್ಯಕ್ಕೆ ಈ ವ್ಯಕ್ತಿ ಬೆಂಗಳೂರಿನಿಂದ ಹೊರಗಡೆ ಕುಳಿತುಕೊಂಡು ಪೊಲೀಸರಿಗೆ ಕರೆ ಮಾಡಿದ್ದ ಎಂದು ತಿಳಿದು ಬಂದಿದ್ದು ಈ ಕಿರಾತಕನಿಗಾಗಿ ಶಿವಾಜಿನಗರ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.