ಡೈಲಿ ವಾರ್ತೆ: 6 ಜುಲೈ 2023

ಉಳ್ಳಾಲ: ಭಾರೀ ಗಾಳಿ ಮಳೆಗೆ ಶಿಕ್ಷಣ ಸಂಸ್ಥೆಯ ಮೇಲ್ಛಾವಣಿ ಕುಸಿತ, ತಪ್ಪಿದ ಅನಾಹುತ !

ಮಂಗಳೂರು: ಭಾರೀ ಮಳೆಗೆ ಮಂಗಳೂರು ಹೊರಹೊಲಯದ ತಲಪಾಡಿಯ ಶಾರದಾ ಸ್ಕೂಲ್ ಮತ್ತು ಕಾಲೇಜಿನ ಶೀಟ್ ಮೇಲ್ಛಾವಣಿ ಕುಸಿದುಬಿದ್ದಿದೆ. ಇದರಿಂದ ಶಾಲಾ ವಾಹನಗಳು ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಶಾಲಾ, ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ನಿನ್ನೆ (ಜುಲೈ 05) ಈ ಘಟನೆ ನಡೆದಿದ್ದು ಇಂದು(ಜುಲೈ 06) ಬೆಳಕಿಗೆ ಬಂದಿದೆ.
ದೇವಿನಗರದ ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕ್ಯಾಂಪಸ್ ನ ಆರು ಅಂತಸ್ತಿನ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಶೀಟ್ ಹಾಕಲಾಗಿತ್ತು. ಇದೀಗ ಭಾರಿ ಗಾಳಿ-ಮಳೆಯಿಂದಾಗಿ ಶೀಟ್ ಛಾವಣಿ ಕುಸಿದುಬಿದ್ದಿದೆ. ಇನ್ನು ಶೀಟ್ ಜೊತೆಗೆ ಹಾಕಲಾಗಿದ್ದ ಭಾರೀ ಗಾತ್ರದ ಕಬ್ಬಿಣದ ಸಲಾಕೆಗಳು ಉರುಳಿ ಬಿದ್ದಿವೆ. ಸದ್ಯ ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಅನಾಹುತ ತಪ್ಪಿದೆ ಎಂದು ಶಾಲಾ ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟಿದೆ.