ಸಾಂದರ್ಭಿಕ ಚಿತ್ರ

ಡೈಲಿ ವಾರ್ತೆ:27 ಜುಲೈ 2023

ವಿದ್ಯುತ್ ಅವಘಡ: ಕೊಟ್ಟಿಗೆಯಲ್ಲಿದ್ದ 7 ಹಸುಗಳು ಸಜೀವ ದಹನ

ಕಾರವಾರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ 7 ಜಾನುವಾರುಗಳು ಸಜೀವ ದಹನಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಳೂರಿನಲ್ಲಿ ನಡೆದಿದೆ.

ಮಂಜುನಾಥ್ ಶೇಟ್ ಅವರಿಗೆ ಸೇರಿದ ಜಾನುವಾರುಗಳು ಇದಾಗಿದ್ದು ತಡ ರಾತ್ರಿ ಆಕಸ್ಮಿಕವಾಗಿ ಆದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ 4 ಆಕಳು, 3 ಕರುಗಳು ಸಾವನ್ನಪ್ಪಿವೆ. ಅಂದಾಜು 2.5 ಲಕ್ಷ ರೂ. ಮೌಲ್ಯದ ಜಾನುವಾರಗಳು ಇದಾಗಿತ್ತು ಎನ್ನಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಮನೆಯಿಂದ ಕೊಟ್ಟಿಗೆ ದೂರ ಇರುವುದರಿಂದಾಗಿ ಮನೆಯವರು ಬೆಂಕಿ ಅನಾಹುತದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.