ಡೈಲಿವಾರ್ತೆ: 25/ಜು./2026

ಕನ್ನಡ ರಾಜ್ಯೋತ್ಸವ: ಶಾಶ್ವತ ಧ್ವಜಕಟ್ಟೆ ನಿರ್ಮಾಣಕ್ಕೆ ಕರವೇ ಮನವಿ: ಪುರಸಭೆ ಹಾಗೂ ತಹಶೀಲ್ದಾರ್ ಭರವಸೆ

​ಕುಂದಾಪುರ : ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ನಗರದಲ್ಲಿ ಶಾಶ್ವತ ಧ್ವಜಕಟ್ಟೆಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕುಂದಾಪುರ ತಾಲೂಕು ಘಟಕದ ವತಿಯಿಂದ ಪುರಸಭೆ ಹಾಗೂ ತಾಲೂಕು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಅಂತಿಮ ಮನವಿ ಪತ್ರ ಸಲ್ಲಿಸಲಾಯಿತು.

​ಕರವೇ ಉಡುಪಿ ಜಿಲ್ಲಾಧ್ಯಕ್ಷರಾದ ಅ. ರಾ. ಪ್ರಭಾಕರ ಪೂಜಾರಿ.ಅವರ ಮಾರ್ಗದರ್ಶನದಲ್ಲಿ ಹಾಗೂ ಕುಂದಾಪುರ ತಾಲೂಕಾಧ್ಯಕ್ಷರಾದ ಶಿವ ಆರ್. ಪೂಜಾರಿ ಅವರ ಸಾರಥ್ಯದಲ್ಲಿ ಕರವೇ ತಾಲೂಕು ಪದಾಧಿಕಾರಿಗಳು ಮತ್ತು ಕೆಚ್ಚೆದೆಯ ಕನ್ನಡ ಸೈನಿಕರು ನಿಯೋಗದಲ್ಲಿ ತೆರಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

​ಸಾಲು ಸಾಲು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ತಾತ್ಕಾಲಿಕ ವ್ಯವಸ್ಥೆಗಳಲ್ಲೇ ನಡೆಯುತ್ತಿದ್ದು, ತಾಲೂಕು ಕೇಂದ್ರದಲ್ಲಿ ಕನ್ನಡಾಂಬೆಯ ಗರಿಮೆಯನ್ನು ಎತ್ತಿಹಿಡಿಯುವಂತ ಶಾಶ್ವತ ಧ್ವಜಕಟ್ಟೆಯೊಂದರ ಅಗತ್ಯ ತುರ್ತಾಗಿದೆ.

ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ತಕ್ಷಣವೇ ಸ್ಪಂದಿಸಿ ಸ್ಥಳಾವಕಾಶ ನಿಯೋಜಿಸಬೇಕು ಎಂದು ಕರವೇ ಮುಖಂಡರು ಒತ್ತಾಯಿಸಿದರು.
​ಅಧಿಕಾರಿಗಳ ಸ್ಪಂದನೆ : ಮನವಿ ಸ್ವೀಕರಿಸಿದ ಪುರಸಭೆ ಹಾಗೂ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು, ಕರವೇ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಧ್ವಜಕಟ್ಟೆ ಸ್ಥಾಪನೆಗೆ ಸೂಕ್ತ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

​ಈ ಸಂದರ್ಭದಲ್ಲಿ ಕರವೇ ತಾಲೂಕು ಘಟಕದ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.