ಡೈಲಿ ವಾರ್ತೆ:31 ಆಗಸ್ಟ್ 2023

ಮಾಜಿ ಸಿಎಂ ಕುಮಾರಸ್ವಾಮಿ ಅರೋಗ್ಯದಲ್ಲಿ ಚೇತರಿಕೆ – ಐಸಿಯುನಿಂದ ವಾರ್ಡ್‌ಗೆ ಶಿಫ್ಟ್

ಬೆಂಗಳೂರು: ಅನಾರೋಗ್ಯ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಮಂಗಳವಾರ ತಡರಾತ್ರಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಅವರನ್ನು ಐಸಿಯುನಿಂದ (ICU) ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.

ಕುಮಾರಸ್ವಾಮಿ ಅವರಿಗೆ ಎಡಭಾಗದಲ್ಲಿ ರಕ್ತನಾಳ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವೈದ್ಯರು ಅವರನ್ನು ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಮಾಡಿ ನಿಗಾವಹಿಸಿದ್ದಾರೆ.

ವಾರ್ಡ್‌ಗೆ ಶಿಫ್ಟ್ ಮಾಡುವ ಮೊದಲು ಹೆಚ್‌ಡಿಕೆ ಆರೋಗ್ಯ ಪರಿಸ್ಥಿತಿ ತಿಳಿಯುವ ಸಲುವಾಗಿ ಸಿಟಿ ಸ್ಕ್ಯಾನ್ ಮಾಡಿದ್ದು, ರಿಪೋರ್ಟ್‌ನಲ್ಲಿ ಆರೋಗ್ಯ ಸುಧಾರಿಸಿರುವುದು ಕಂಡುಬಂದಿದೆ. ಬಳಿಕ ಅವರನ್ನು ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರನ್ನು ನಿರ್ಮಲಾನಂದ ಶ್ರೀಗಳು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಆರೋಗ್ಯ ಸ್ಥಿರವಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ. ಯಾವಾಗ ಡಿಸ್ಚಾರ್ಜ್ ಮಾಡಬೇಕೆಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ಕುಮಾರಸ್ವಾಮಿಯವರು ಚೆನ್ನಾಗಿ ಮಾತನಾಡಿದರು. ಅವರು ಬೇಗ ಗುಣಮುಖರಾಗಿ ಬರುತ್ತಾರೆ ಎಂದರು.