ಡೈಲಿ ವಾರ್ತೆ: 09/OCT/2023

ಕುಡಿದ ಮತ್ತಲ್ಲಿ ರಸ್ತೆ ಮಧ್ಯೆಯೇ ಮಲಗಿದ ವ್ಯಕ್ತಿ – ಅಂಬುಲೆನ್ಸ್‌ ಬಂದ ಕೂಡಲೆ ಎದ್ದು ನಿಂತ ಭೂಪ

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲಾಗದೆ ವ್ಯಕ್ತಿಯೊಬ್ಬ ರಾತ್ರೋರಾತ್ರಿ ರಸ್ತೆ ಮಧ್ಯೆ ಮಲಗಿದ್ದು, ಅದೃಷ್ಟವಶಾತ್ ಬೈಕ್‌ನ ಇಂಡಿಕೇಟರ್ ಆನ್ ಇದ್ದಿದ್ದರಿಂದ ಆತನ ಜೀವ ಉಳಿದಿರುವ ಘಟನೆ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಬೈಕ್ ಸವಾರ ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲಾಗದೆ ರಾತ್ರಿ ವೇಳೆ ರಸ್ತೆ ಮಧ್ಯೆ ಮಲಗಿದ್ದ. ಅದೇ ರಸ್ತೆ ಮೂಲಕ ಬಂದಿದ್ದ ಇತರ ಪ್ರಯಾಣಿಕರು ರೋಡ್ ಮಧ್ಯೆ ಇಂಡಿಕೇಟರ್ ಆನ್ ಆಗಿ ಬಿದ್ದಿದ್ದ ಬೈಕ್ ಕಂಡು ಅಪಘಾತವಾಗಿರುವುದೆಂದು ಭಾವಿಸಿದ್ದಾರೆ. ತಕ್ಷಣ ಅಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಅಂಬುಲೆನ್ಸ್ ಬರುತ್ತಿದ್ದಂತೆ ಬೈಕ್ ಸವಾರ ಸೈರನ್ ಸದ್ದು ಕೇಳಿ ಎದ್ದು ಕುಳಿತಿದ್ದಾನೆ. ಅದೃಷ್ಟವಶಾತ್ ಬೈಕ್ ಇಂಡಿಕೇಟರ್ ಆನ್ ಇದ್ದಿದ್ದರಿಂದ ರಸ್ತೆಯಲ್ಲಿ ಪ್ರಯಾಣಿಕ ಮಲಗಿರುವುದು ತಿಳಿದುಬಂದಿದೆ. ಇಲ್ಲದೇ ಹೋಗಿದ್ದಲ್ಲಿ ಆತನ ಉಪಸ್ಥಿತಿ ತಿಳಿಯದೆ ಅಪಘಾತವಾಗುವ ಸಾಧ್ಯತೆ ಇತ್ತು ಎಂದು ಇತರ ಪ್ರಯಾಣಿಕರು ತಿಳಿಸಿದ್ದಾರೆ.

ಇದೀಗ ಬಣಕಲ್ ಠಾಣಾ ಪೊಲೀಸರು ಬೈಕ್ ಸವಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.