ಡೈಲಿ ವಾರ್ತೆ: 23/OCT/2023

ಹುಲಿ ಉಗುರು ಧರಿಸಿದ್ಧ ಪ್ರಕರಣ: ಬಿಗ್‌ ಬಾಸ್‌ ಮನೆಯಿಂದಲೇ ಸ್ಪರ್ಧಿ ವರ್ತೂರು ಸಂತೋಷ್‌ ಬಂಧನ!

ಬೆಂಗಳೂರು: ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಮನೆಯಿಂದಲೇ ಸ್ಪರ್ಧಿಯೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ.

ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ ಬಾಸ್ ಕನ್ನಡ ಸೀಸನ್‌ 10 ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಕೃಷಿಕ ವರ್ತೂರು ಸಂತೋಷ್ ಅವರನ್ನು ರಾಮೋನಹಳ್ಳಿ ಅರಣ್ಯಾಧಿಕಾರಿಗಳು ಭಾನುವಾರ ರಾತ್ರಿ (ಅ.22 ರಂದು) ಬಿಗ್‌ ಬಾಸ್‌ ಮನೆಯೊಳಗೆ ಹೋಗಿ ಬಂಧಿಸಿದ್ದಾರೆ.

ಹಳ್ಳಿಕಾರ್‌ ಹಸುಗಳನ್ನು ಸಾಕುತ್ತಾ ,ಅದರ ಪಾಲನೆ ಮಾಡಿ ಕೃಷಿಕನಾಗಿ ಸಾಧನೆ ಮಾಡಿರುವ ವರ್ತೂರು ಸಂತೋಷ್ ಅವರು ಚಿನ್ನಾಭರಣಗಳನ್ನು ಹೆಚ್ಚಾಗಿ ಧರಿಸುತ್ತಾರೆ. ಇತ್ತೀಚೆಗೆ ವೀಕೆಂಡ್‌ ನಲ್ಲಿ ಕಿಚ್ಚನ ಜೊತೆ ಮಾತನಾಡುವಾಗ ಅವರು ಹುಲಿಯ ಉಗುರು ಇರುವ ಲಾಕೆಟ್‌ ನ್ನು‌ ಕುತ್ತಿಗೆಗೆ ಹಾಕಿದ್ದರು. ಹುಲಿಯ ಉಗುರನ್ನು ಈ ರೀತಿಯಾಗಿ ಉಪಯೋಗಿಸುವುದು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಅಪರಾಧವಾಗಿದ್ದು, ಇದನ್ನು ನೋಡಿದ ಅರಣ್ಯಾಧಿಕಾರಿಗಳು ಬಿಗ್‌ ಬಾಸ್‌ ಮನೆಯೊಳಗೆ ಹೋಗುವ ಮುನ್ನ ಕೇಸ್ ದಾಖಲಿಸಿ ಆ ಬಳಿಕ ವರ್ತೂರು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಸದ್ಯ ವರ್ತೂರು ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಸಂತೋಷ್‌ ಇದನ್ನು ಹಣಕೊಟ್ಟು ಖರೀದಿಸಿದ್ದಾರೆ ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.