ಡೈಲಿ ವಾರ್ತೆ: 13/NOV/2023

ಕಾಪು: ನಾಗಸ್ವರ ವಾದಕ ಶೇಖ್ ಜಲೀಲ್ ಸಾಹೇಬ್ ಹೃದಯಾಘಾತದಿಂದ ಮೃತ್ಯು!

ಕಾಪು: ಕಾಪು ಸಾವಿರ ಸೀಮೆಯ ಪಾರಂಪರಿಕ ನಾಗಸ್ವರ ವಾದಕ ಶೇಖ್ ಜಲೀಲ್ ಸಾಹೇಬ್ (56) ಅವರು ಸೋಮವಾರ ಹೃದಯಾಘಾತದಿಂದಾಗಿ ನಿಧನ ಹೊಂದಿದರು.

ಮೃತರು, ಪತ್ನಿ, ಮಗಳು, ಸಹೋದರ‌ ಸಹಿತ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಜಲೀಲ್ ಸಾಹೇಬ್ ಅವರು ಶನಿವಾರ ಕೊಪ್ಪಲಂಗಡಿಯಲ್ಲಿ ನಡೆದ ಮುಳ್ಳಮುಟ್ಟೆ, ರವಿವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ದೀಪಾವಳಿ ಸಂಭ್ರಮ ಮತ್ತು ಬಲಿ ಹೊರಡುವ ಸಂದರ್ಭದಲ್ಲೂ ನಾಗಸ್ವರ ಸೇವೆ ನೀಡಿದ್ದರು. ಸೋಮವಾರ ಮುಂಜಾನೆ ನಾಗಸ್ವರ ಹೆಗಲಿಗೇರಿಸಿಕೊಂಡು ಮನೆಯಿಂದ ಹೊರಗೆ ಹೋಗಿದ್ದು, ಹೋಟೇಲ್ ನಲ್ಲಿ ಚಹಾ ಕುಡಿಯಲು ಕುಳಿತಿದ್ದ ವೇಳೆ ಹೃದಯಾಘಾತ ಕ್ಕೊಳಗಾಗಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಾಪು ಸಾವಿರ ಸೀಮೆಯ ಒಡೆಯ ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿ, ಕಾಪು ಮೂರನೇ ಮಾರಿಗುಡಿ ಸಹಿತ ಕಾಪು ಮಾರಿಯಮ್ಮ ದೇವಿ ಸನ್ನಿಧಿ ಹಾಗೂ ಕಾಪು ಸಾವಿರ ಸೀಮೆಯ ಹೆಚ್ಚಿನ ದೇವಸ್ಥಾನ, ಗರಡಿ, ದೇವಸ್ಥಾನಗಳಲ್ಲಿ ನಾಗಸ್ವರ ವಾದಕರಾಗಿ ಸೇವೆ ನೀಡುತ್ತಿದ್ದರು.
ಅಜ್ಜ ಇಮಾಮ್ ಸಾಹೇಬ್, ತಂದೆ ಬಾಬನ್ ಸಾಹೇಬ್ ಅವರಿಂದ ಬಳುವಳಿಯಾಗಿ ಬಂದ ನಾಗಸ್ವರ ವಾದನವನ್ನು ಕಳೆದ 40 ವರ್ಷಗಳಿಂದ ಮುಖ್ಯ ವೃತ್ತಿಯನ್ನಾಗಿಸಿ ಕೊಂಡು ಬಂದಿದ್ದ ಜಲೀಲ್ ಸಾಹೇಬ್ ಅವರು ಮುಸ್ಲಿಂ ವಾದ್ಯ ವಾದಕರಾಗಿದ್ದರೂ ಹಿಂದೂ ಧರ್ಮ, ಸಂಪ್ರಧಾಯ, ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. ಅವರ ಪೂರ್ವಜರಿಂದ ಪರಂಪರಾಗತವಾಗಿ ಬಳುವಳಿಯಾಗಿ ಬಂದಿದ್ದ ನಾಗಸ್ವರ ವಾದನವನ್ನು ಅನೂಚಾನವಾಗಿ ನಡೆಸಿಕೊಂಡು ಬರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.