ಡೈಲಿ ವಾರ್ತೆ: 20/Mar/2024

ದಕ್ಷಿಣ ಕನ್ನಡ: ಶಾಂತಿಯುತ ಲೋಕಸಭಾ ಚುನಾವಣೆಗೆ – 19 ಮಂದಿ ರೌಡಿಶೀಟರ್ ಗಳಿಗೆ ಗಡಿಪಾರು ಆದೇಶ

ಮಂಗಳೂರು: ಕಮಿಷನರೇಟ್‌ ವ್ಯಾಪ್ತಿಯ ರೌಡಿಗಳ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದ 19 ಆರೋಪಿಗಳನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಂತಿ ಕಾಪಾಡುವ ಸಲುವಾಗಿ ನಗರ ಪೊಲೀಸ್‌ ಕಮಿಷನರ್‌ ಅನುಪಮ ಅಗರ್ವಾಲ್ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಮೂಡುಬಿದಿರೆ ವಿಶಾಲನಗರದ ಹುಡ್ಕೊ ಕಾಲೊನಿಯ ಅತ್ತೂರು ನಸೀಬ್‌ (40), ಕಾಟಿಪಳ್ಳ ದುರ್ಗಾಪರಮೇಶ್ವರಿನಗರದ ಶ್ರೀನಿವಾಸ ಎನ್‌ (24), ಬಜಪೆ ಶಾಂತಿಗುಡ್ಡೆಯ ಬದ್ರಿಯಾನಗರದ ಮಹಮ್ಮದ್ ಸಫ್ವಾನ್‌ (28), ಕಾವೂರು ಕೆಎಚ್‌ಬಿ ಕಾಲೊನಿಯ ಜಯೇಶ್‌ ಅಲಿಯಾಸ್‌ ಸಚ್ಚು (28), ನೀರುಮಾರ್ಗ ಪೆದಮಲೆ ಭಟ್ರಕೋಡಿಯ ವರುಣ್‌ ಪೂಜಾರಿ (30), ಅಶೋಕನಗರ ಕೋಡಿಕಲ್‌ನ ಮಹಮ್ಮದ್ ಅಜೀಜ್‌ ಅಲಿಯಾಸ್ ಕದ್ರಿ ಅಜೀಜ್‌ (40), ಕಾವೂರು ಪಿಂಟೊ ವ್ಯಾಲಿ ರಸ್ತೆಯ ಅಬ್ದುಲ್ ಇಶಾಮ್ ಅಲಿಯಾಸ್‌ ಹಿಶಾಮ್ (30), ಸುರತ್ಕಲ್ ಇಡ್ಯಾದ ಕಾರ್ತಿಕ್ ಶೆಟ್ಟಿ (28), ಗಣೇಶಪುರ ಕೈಕಂಬದ ದೀಕ್ಷಿತ್ ಪೂಜಾರಿ (23), ಕಾಟಿಪಳ್ಳ ಕೃಷ್ಣಾಪುರದ ಲಕ್ಷ್ಮೀಶ (27), ಪಡು ಬೊಂಡಂತಿಲದ ಕಿಶೋರ್ ಸನಿಲ್‌ (36), ಉಳ್ಳಾಲ ಕೋಡಿಯ ಹಸೈನಾರ್ ಸಯ್ಯದ್ ಅಲಿ (38), ಕುದ್ರೋಳಿಯ ಅಬ್ದುಲ್ ಜಲೀಲ್‌ (28), ಬೋಳೂರಿನ ರೋಷನ್ ಕಿಣಿ (18), ಕಸಬ ಬೆಂಗರೆಯ ಅಹಮದ್ ಸಿನಾನ್‌ (21), ಜಪ್ಪಿನಮೊಗರು ಕಡೇಕಾರ್‌ನ ನಿತೇಶ್ ಕುಮಾರ್‌ (28), ಬಜಾಲ್ ಕುತ್ತಡ್ಕದ ಗುರುಪ್ರಸಾದ್‌ (38) ಮತ್ತು ಭರತ್ ಪೂಜಾರಿ (31) ಜೆಪ್ಪು ಕುಡುಪಾಡಿಯ ಸಂದೀಪ್‌ ಶೆಟ್ಟಿ (37) ಗಡಿಪಾರಿಗೆ ಒಳಗಾದವರು. ಇವರನ್ನು ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್ ತಿಳಿಸಿದ್ದಾರೆ.

ಏಳು ರೌಡಿಗಳನ್ನು ಈಚೆಗಷ್ಟೇ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಕಮಿಷನರೇಟ್ ವ್ಯಾಪ್ತಿಯಿಂದ ಗಡಿಪಾರಾದವರ ಸಂಖ್ಯೆ 26ಕ್ಕೆ ಏರಿದೆ. 367 ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದರು.