ಡೈಲಿ ವಾರ್ತೆ: 20/April/2024

ಉಡುಪಿ ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

ಉಡುಪಿ: ವಿಪರೀತ ಸೆಕೆಯಿಂದ ತತ್ತರಿಸಿದ್ದ ಕರಾವಳಿಯ ಜನತೆಗೆ ವರ್ಷಾಧಾರೆ ತಂಪೆರೆದಿದೆ.
ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಮಲ್ಪೆ, ಪಡುಬಿದ್ರೆ, ಕಾಪು, ಶಿರ್ವ, ಕಾರ್ಕಳ, ಬೈಲೂರು,ಕೋಟ, ಕುಂದಾಪುರ, ಬ್ರಹ್ಮಾವರ, ಬೈಂದೂರು ಮೊದಲಾದ ಭಾಗದಲ್ಲಿ ಶನಿವಾರ ಮುಂಜಾನೆ 2 ಗಂಟೆಗೂ ಅಧಿಕ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಾಳೆ ಸುರಿದಿದೆ.

ಉಡುಪಿಯ ಕೆಲ ಭಾಗಗಳಲ್ಲಿ ಬೆಳಿಗ್ಗೆ 7 ಗಂಟೆಯ ನಂತರವೂ ಮಳೆ ಸುರಿದ ದೃಶ್ಯ ಸಾಮಾನ್ಯವಾಗಿತ್ತು.
ಗಾಳಿ ಮಳೆಯಿಂದಾಗಿ ಹಲವೆಡೆ ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಪರಿಣಾಮ ರಾತ್ರಿ ಸ್ಥಗಿತಗೊಂಡಿದ್ದ ವಿದ್ಯುತ್ ಪೂರೈಕೆ ಬೆಳಗ್ಗೆವರೆಗೂ ವ್ಯತ್ಯಯವಾಗಿತ್ತು. ಈಗಾಗಲೆ‌ ನೀರಿನ ಸಂಕಷ್ಟದಲ್ಲಿದ್ದ ಹಲವು ಗ್ರಾಮ, ನಗರ ಭಾಗಕ್ಕೆ ಈ ಮುಂಗಾರು ಪೂರ್ವ ಮಳೆ ನಿಟ್ಟುಸಿರು ಬಿಡುವಂತೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆಯ ವೇಳೆ ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ.