ಡೈಲಿ ವಾರ್ತೆ: 03/ಮೇ /2024

ಲವ್‌ ಮಾಡಿ ಯುವತಿಯನ್ನು ಕರೆದೊಯ್ದನೆಂದು ಯುವಕನ ತಾಯಿಯನ್ನೇ ಕಂಬಕ್ಕೆ ಕಟ್ಟಿ ಥಳಿತ!

ಹಾವೇರಿ: ಕೆಲವೊಮ್ಮೆ ಮಕ್ಕಳು ಮಾಡುವ ತಪ್ಪಿಗೆ ಹೆತ್ತವರು ಶಿಕ್ಷೆ ಅನುಭವಿಸುತ್ತಾರೆ. ಅಂತೆಯೇ ಹಾವೇರಿ  ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ.

ಪ್ರೀತಿಸಿ ಬಳಿಕ ಯುವತಿಯನ್ನು ಕರೆದುಕೊಂಡು ಹೋದನೆಂದು ಸಿಟ್ಟಿಗೆದ್ದ ಯುವತಿ ಕಡೆಯವರು ಯುವಕನ ತಾಯಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆ 4 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

50 ವರ್ಷದ ಹನುಮವ್ವ ಮೆಡ್ಲೇರಿ ಹಲ್ಲೆಗೊಳಗಾದ ಮಹಿಳೆ. ಆರೋಪಿಗಳನ್ನು ಚಂದ್ರಪ್ಪ , ಗಂಗಪ್ಪ ಹಾಗೂ ಗುತ್ತೆವ್ವ ಎಂದು ಗುರುತಿಸಲಾಗಿದೆ. ಹನುಮವ್ವಳ ಮಗ ಯುವತಿಯನ್ನ ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮಗ ಮಾಡಿದ ತಪ್ಪಿಗೆ ತಾಯಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ.
ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.