ಡೈಲಿ ವಾರ್ತೆ: 31/ಮೇ /2024

ಕುಂದಾಪುರ: ಅಪ್ರಾಪ್ತ ವಯಸ್ಸಿನ ಯುವತಿಗೆ ವಿವಾಹ – ಮದುಮಗ ಸಹಿತ ಮೂವರು ಜೈಲಿಗೆ.!

ಕುಂದಾಪುರ: ಬಾಲ್ಯವಿವಾಹದ ಪ್ರಕರಣದಲ್ಲಿ ಬಾಲಕಿ ತಂದೆ ಸಂತೋಷ್ ಶೆಟ್ಟಿ, ಬಾವ ರಾಜೇಶ್ ಶೆಟ್ಟಿ ಹಾಗೂ ಮದುವೆಯಾದ ವ್ಯಕ್ತಿ ತೊಂಭಟ್ಟು ನಿವಾಸಿ ಭರತ್ ಶೆಟ್ಟಿಯ ಸಹಿತ ಮೂವರ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅಪ್ರಾಪ್ತೆಗೆ 17 ವರ್ಷ 8 ತಿಂಗಳಾಗಿದ್ದು, ವಿವಾಹ ಮಾಡಿಕೊಂಡಿರುವ ಆರೋಪಿ ಭರತ್ ಶೆಟ್ಟಿಗೆ 37 ವರ್ಷವಾಗಿದೆ ಎಂದು ತಿಳಿದುಬಂದಿದೆ. ಬಾಲಕಿಯ ತಂದೆ ಸಂತೋಷ್ ಶೆಟ್ಟಿ ಹಾಗೂ ಬಾವ ರಾಜೇಶ್ ಶೆಟ್ಟಿ ಸೇರಿ ಆರೋಪಿ ಭರತ್ ಶೆಟ್ಟಿಯೊಂದಿಗೆ ವಿವಾಹ ಮಾಡಿದ್ದಾರೆ.

ಅಪ್ರಾಪ್ತೆ ಹಾಗೂ ಆರೋಪಿ ಭರತ್ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಯುವತಿ ತನ್ನನ್ನು ಮದುವೆಯಾಗಬೇಕು ಎಂದು ಆರೋಪಿ ಭರತ್ ಶೆಟ್ಟಿಯನ್ನು ಒತ್ತಾಯಿಸುತ್ತಿದ್ದಾಳೆನ್ನಲಾಗಿದೆ. ಆದರೆ ಆಕೆಯ ಮನೆಯವರು ಇದಕ್ಕೆ ಒಪ್ಪದಿದ್ದುದಕ್ಕೆ, ಮದುವೆ ಮಾಡಿ ಕೊಡದೇ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯ ಬಳಿ ಹೇಳಿಕೊಂಡಿದ್ದಳೆನ್ನಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಬಾಲಕಿಯ ತಂದೆ ಮಗಳ ಮಾತಿಗೆ ಹೆದರಿ, ತನ್ನ ದೊಡ್ಡ ಮಗಳ ಗಂಡ ರಾಜೇಶ್ ಶೆಟ್ಟಿ (ಅಳಿಯ) ಯೊಂದಿಗೆ ವಿಷಯ ಪ್ರಸ್ತಾಪಿಸಿದ್ದು, ಬಳಿಕ ದಿಕ್ಕು ಕಾಣದೇ ಆರೋಪಿ ಭರತ್ ಶೆಟ್ಟಿಯ ಜೊತೆ ಹಾಲಾಡಿ ಗ್ರಾಮದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ 21ರಂದು ರಾತ್ರಿ 8 ಗಂಟೆಗೆ ವಿವಾಹ ಮಾಡಿಸಿದ್ದಾರೆನ್ನಲಾಗಿದೆ. ಆದರೆ ಮದುವೆಗೆ ತಾಯಿ ಒಪ್ಪಿಗೆ ಇಲ್ಲದ್ದರಿಂದ ಮದುವೆಯ ಬಳಿಕ ಮಗಳನ್ನು ಮನೆಗೆ ಸೇರಿಸಿಕೊಳ್ಳದ ಕಾರಣ, ಆರೋಪಿ ಭರತ್ ಶೆಟ್ಟಿ ಆಕೆಯನ್ನು ತೊಂಬಟ್ಟಿನ ತನ್ನ ಮನೆಗೆ ಕರೆದೊಯ್ದಿದ್ದ.

ಬಾಲ್ಯ ವಿವಾಹ ನಡೆದಿರುವ ಬಗ್ಗೆ ಕುಂದಾಪುರದ ಸಹಾಯಕ ಶಿಶು ಅಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ರೂಪಾ ಬಂಗೇರ ಅವರಿಗೆ ದೂರು ಬಂದಿದ್ದು, ಅದರಂತೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ರೂಪಾ ಬಂಗೇರ ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.