ಡೈಲಿ ವಾರ್ತೆ: 27/ಜೂ./2024

ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ನವದೆಹಲಿ: ಬಿಜೆಪಿ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ (96) ಅವರನ್ನು ಬುಧವಾರ ದೆಹಲಿಯ ಏಮ್ಸ್‌ ಗೆ ದಾಖಲಿಸಲಾಗಿದೆ. ಅಡ್ವಾಣಿ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಮೂಲಗಳು ತಿಳಿಸಿವೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅಡ್ವಾಣಿ ಬಳಲುತ್ತಿದ್ದು, ಆತಂಕಕ್ಕೆ ಕಾರಣವಿಲ್ಲ. ಮುಂಜಾಗ್ರತಾಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ಕ್ಕೆ ಅಡ್ವಾಣಿ ಪಾತ್ರರಾಗಿದ್ದರು. ವಯೋಸಹಜ ಕಾರಣಗಳಿಂದಾಗಿ ರಾಷ್ಟ್ರಪತಿ ಭವನಕ್ಕೆ ಬರಲಾಗದ ಹಿನ್ನೆಲೆಯಲ್ಲಿ ಸ್ವತಃರಾಷ್ಟ್ರಪತಿ ದೌಪದಿ ಮುರ್ಮು ಅವರೇ, ಅಡ್ವಾಣಿ ಮನೆಗೆ ತೆರಳಿ ಅವರಿಗೆ ‘ಭಾರತ ರತ್ನ’ ಪ್ರದಾನ ಮಾಡಿದ್ದರು.

ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ್ದ ಅಡ್ವಾಣಿ ಜನಸಂಘ, ಜನತಾಪಕ್ಷ, ಸಂಘ ಪರಿವಾರದ ಮೂಲಕ ರಾಜಕೀಯಕ್ಕೆ ಬಂದು ಹಲವು ಹುದ್ದೆಗಳನ್ನು ನಿರ್ವಹಿಸಿದ ಖ್ಯಾತಿ ಹೊಂದಿದ್ದಾರೆ.