ಡೈಲಿ ವಾರ್ತೆ: 27/ಜೂ./2024

ಪರ್ಕಳ: ಚಲಿಸುತ್ತಿದ್ದ ಖಾಸಗಿ ಬಸ್ ಚಾಲಕನಿಗೆ ಮೂರ್ಛೆ – ಹಿಮ್ಮುಖವಾಗಿ ಚಲಿಸಿದ ಬಸ್: ತಪ್ಪಿದ ಬಾರಿ ದುರಂತ!

ಉಡುಪಿ: ಮಣಿಪಾಲದಿಂದ ಹೆರ್ಗದತ್ತ ತೆರಳುತ್ತಿದ್ದ ಖಾಸಗಿ ಬಸ್‌ ಚಾಲಕನಿಗೆ ಮೂರ್ಛೆ ಬಂದು ಬಸ್ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ತೋಡಿಗೆ ಬಿದ್ದ ಘಟನೆ ಗುರುವಾರ ಸಂಜೆ ಪರ್ಕಳದಲ್ಲಿ ನಡೆದಿದೆ.

ಕೆಳಪರ್ಕಳದ ಬಳಿ ತೆರಳುತ್ತಿದ್ದಾಗ ಚಾಲಕನ ಮೂರ್ಛೆ ಬಂದಿದ್ದು ಕೂಡಲೇ ಅವರು ಸ್ಟೇರಿಂಗ್‌ ಬಿಟ್ಟಿದ್ದಾರೆ. ಈ ವೇಳೆ ಬಸ್‌ ಹಿಮ್ಮುಖವಾಗಿ ಚಲಿಸಿದೆ. ಬಸ್ಸಿನಲ್ಲಿ ಸುಮಾರು 40 ಜನ ಪ್ರಯಾಣಿಕರು ಇದ್ದರು. ಕೂಡಲೇ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಳಕ್ಕೆ ಹಾರಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಬಸ್‌ ತೋಡಿಗೆ ಬಿದ್ದು ಅಲ್ಲೇ ನಿಂತಿದೆ. ಇದರಿಂದಾಗಿ ಬಾರಿ ದುರಂತವೊಂದು ತಪ್ಪಿದಂತಾಗಿದೆ.

ಚಾಲಕನನ್ನು ಕೂಡಲೇ ಬಸ್ಸಿನ ನಿರ್ವಾಹಕ ಹಾಗೂ ಮಣಿಪಾಲ ಆಟೋ ಚಾಲಕ ಅಬ್ದುಲ್ ರಶೀದ್ ರವರು ತನ್ನ ಆಟೋರಿಕ್ಷಾದಲ್ಲಿ ಹಾಕಿಕೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಪ್ರಯಾಣಿಕರು ಮತ್ತೊಂದು ಬಸ್ಸಿನಲ್ಲಿ ತೆರಳಿದ್ದಾರೆ. ಬಸ್ಸಿನ ಹಿಂಭಾಗ ಜಖಂಗೊಂಡಿದೆ.